ಬೆಂಗಳೂರು: ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಮೇಲೆ ಇನ್ಸ್ಪೆಕ್ಟರ್ ಗಳಾದ ಅಂಜುಮಾಲಾ ನಾಯ್ಕ್, ಪನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಆದಿತ್ಯ ಆಳ್ವಾ ಮಾಜಿ ಸಚಿವ ಜೀಬರಾಜ್ ಆಳ್ವಾ ಅವರ ಪುತ್ರನಾಗಿದ್ದಾನೆ. ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದೆ. ಇದೇ ಮನೆಯಲ್ಲಿ ವೀಕೆಂಡ್ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಸಿಸಿಬಿ ಬಂಧಿಸಿರುವ ಆರು ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿದೆ.
ಸದ್ಯ ಇಂದು ಬೆಳಗ್ಗೆ ಆದಿತ್ಯ ಆಳ್ವಾ ಮನೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮನೆಯ ಮೇಲೆಯೂ ಸಿಸಿಬಿ ದಾಳಿ ನಡೆಸಿತ್ತು.
ರವಿಶಂಕರ್ ಹೇಳಿದ್ದೇನು?: ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ECSTASY PILL ಮಾತ್ರೆಗಳನ್ನು ವೈಭವ್ ಜೈನ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಆಯೋಜನೆ ಸ್ಥಳ, ಬರೋರ ಹೆಸರುಗಳನ್ನ ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು ಎಂದು ಆರೋಪಿ ರವಿಶಂಕರ್ ಹೇಳಿದ್ದನು.