ಚಿಕ್ಕಮಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶಿಶಿಲಗುಡ್ಡದ ಬಳಿಯ ಬೈರಾಪುರ ಗ್ರಾಮದಲ್ಲಿರುವ ಚೌಡೇಶ್ವರಿಗೆ ಹೊತ್ತಿದ್ದರು. ಇಂದು ಆ ಹರಕೆಯನ್ನು ತೀರಿಸಿದ್ದಾರೆ.
ಕಳೆದ ವರ್ಷ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದ ವೇಳೆ ಬೈರಾಪುರದ ಚೌಡೇಶ್ವರಿ ಶಾಸಕ ಕುಮಾರಸ್ವಾಮಿ ಹರಕೆ ಹೊತ್ತಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಕುರಿ-ಕೋಳಿ ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಕುಮಾರಸ್ವಾಮಿಯವರ ಹರಕೆಯಿಂದಲೋ ಅಥವಾ ಬಿಜೆಪಿಯವರ ಸರ್ವಪ್ರಯತ್ನದಿಂದಲೋ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಹರಕೆ ತೀರಿಸಿದ್ದಾರೆ.
ಹರಕೆಗೆ ವರ್ಷ ತುಂಬುತ್ತಿರುವುದರಿಂದ ಶಾಸಕ ಕುಮಾರಸ್ವಾಮಿ ಶಕ್ತಿ ದೇವತೆ ಬೈರಾಪುರದ ಚೌಡೇಶ್ವರಿಗೆ ಹರಕೆ ತೀರಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ಕಾರ್ಯಕರ್ತರೊಂದಿಗೆ ಬೈರಾಪುರದ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಹರಕೆ ರೂಪದಲ್ಲಿ ಚೌಡೇಶ್ವರಿ ದೇವಿಗೆ ನಾಲ್ಕು ಕುರಿ ಹಾಗೂ ಎಂಟು ಕೋಳಿಯನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೂಡಿಗೆರೆ ಶಾಸಕ ಕುಮಾರಸ್ವಾಮಿ ಯಡಿಯೂರಪ್ಪನವರ ಆಪ್ತ. ಹಲವು ವಿಚಾರದಲ್ಲಿ ಅವರು ಮುಖ್ಯಮಂತ್ರಿಯನ್ನು ತಮ್ಮ ನಾಯಕರೆಂದು ಪರಿಗಣಿಸಿ ಅವರು ಹೇಳಿದಂತೆ ನಡೆದಿದ್ದಾರೆ. ಅವರು ಹಾಕಿದ್ದ ಗೆರೆ ದಾಟಿಲ್ಲ. ಕೆಲ ಬಾರಿ ಅವರು ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿದ್ದರು.