ದಾವಣಗೆರೆ: ಪ್ರೀತಿಸಿ ಮದುವೆಯಾಗಿದ್ದ ಆರು ತಿಂಗಳ ಗರ್ಭಿಣಿಯನ್ನು ಕೊಚ್ಚಿಕೊಂದು ತಾನು ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ದಾವಣಗೆರೆಯ ಜಗಳೂರು ಪಟ್ಟಣದ ಗಿಡ್ಡನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಬೇರೆ ಬೇರೆ ಜಾತಿಯ ಚಂದ್ರಪ್ಪ ಹಾಗೂ ಲಕ್ಷ್ಮೀ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ಅದೇ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಕುರಿ ಕಾಯುತ್ತಾ ಜೀವನ ನಡೆಸುತ್ತಿದ್ದ ಚಂದ್ರಪ್ಪ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಕಳೆದ ರಾತ್ರಿ ಒಬ್ಬರಿಗೊಬ್ಬರಿಗೆ ಜಗಳವಾಗಿದ್ದು ಆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮನೆಯಲ್ಲೇ ಇದ್ದ ಕೊಡಲಿಯಿಂದ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಚಂದ್ರಪ್ಪ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಶಯದಿಂದ ಜಗಳವಾಡುತ್ತಿದ್ದ ಎನ್ನುವುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.
ಜಗಳೂರು ಠಾಣೆ ಪೊಲೀಸರು ಎರಡು ಕುಟುಂಬಸ್ಥರಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.