– ಸಿಆರ್ಪಿಎಫ್ , ಪೊಲೀಸರಿಂದ ಜಂಟಿ ಪರೇಡ್
– ಗುಂಡಿನ ದಾಳಿ ನಡೆಸಿ ಪರಾರಿಯಾದ ಉಗ್ರರು
ಶ್ರೀನಗರ: ಸಿಆರ್ಪಿಎಫ್ ಯೋಧರು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಪರೇಡ್ ನಡೆಸುತ್ತಿದ್ದ ವೇಳೆ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ ಕಡೆ ಗುಂಡಿನ ದಾಳಿ ನಡೆಸಿ, ಭಯೋತ್ಪಾದಕರು ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹಾಗೂ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರೆದಿದ್ದು, ಭಯೋತ್ಪಾದಕರಿಗಾಗಿ ಹುಡುಕುವ ಕಾರ್ಯಾಚರಣೆ ನಡೆಸುತ್ತಿದೆ. ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇತ್ತೀಚೆಗೆ ಕುಲ್ಗಮ್ ಜಿಲ್ಲೆಯಲ್ಲಿ ಶಂಕಿತ ಉಗ್ರ ಗುಂಡಿನ ದಾಳಿ ನಡೆಸಿದ್ದಕ್ಕೆ ಜಮ್ಮು ಕಾಶ್ಮೀರದ ಪೊಲೀಸ್ ಹುತಾತ್ಮರಾಗಿದ್ದರು. ಉಗ್ರರು ಹಲವು ಸುತ್ತು ಗುಂಡಿನ ದಾಳಿ ನಡೆದಿಸಿದ್ದಕ್ಕೆ ಅಬ್ದುಲ್ ರಶೀದ್ ದರ್ ಗಂಭೀರ ಗಾಯಗೊಂಡಿದ್ದರು. ಫರಾ ಗ್ರಾಮದಲ್ಲಿನ ಅವರ ಮನೆಯಲ್ಲೇ ಬುಧವಾರ ಘಟನೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಹುತಾತ್ಮರಾಗಿದ್ದಾರೆ ಎಂದು ಘೋಷಿಸಲಾಗಿತ್ತು.
ಕಳೆದ ಕೆಲವು ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಕಳೆದ ತಿಂಗಳು ಐದು ಜನ ಅಪರಿಚಿತ ಉಗ್ರರನ್ನು ಗುಂಡಿನ ಚಕಮಕಿ ವೇಳೆ ಹತ್ಯೆ ಮಾಡಲಾಗಿತ್ತು. ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ರೇಬನ್ ಏರಿಯಾದಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿತ್ತು.
ಮೇನಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಕೋಲೋನಲ್ ಹಾಗೂ ಮೇಜರ್ ಸೇರಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ವೇಳೆ ಇಬ್ಬರು ಉಗ್ರರು ಸಹ ಹತರಾಗಿದ್ದರು. ಉತ್ತರ ಕಾಶ್ಮೀರದ ಕುಂಪ್ವಾರಾ ಜಿಲ್ಲೆಯ ಹಂದ್ವಾರಾದ ಚಾಂಜಮುಲ್ಲಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು.