-ಜೀವ ಭಯನಾ..? ಝೆಡ್ ಪ್ಲಸ್ ಸೆಕ್ಯೂರಿಟಿ ವ್ಯಾಮೋಹನಾ..?
ಬೆಂಗಳೂರು/ದಾವಣಗೆರೆ: ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಜೀವ ಬೆದರಿಕೆ ಇದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊ0ಡಿದೆ. ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ಪೊಲೀಸ್ ಇಲಾಖೆಗೆ ಪರಮೇಶ್ವರ್ ಅವರಿಗೆ ಝೆಡ್+ಸೆಕ್ಯೂರಿಟಿ ನೀಡುವಂತೆ ಸೂಚನೆ ನೀಡಿದ್ದಾರೆ.
ಹಾಲಿ, ಮಾಜಿ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಿಗೆ ನೀಡುವ ಝೆಡ್+ ಸೆಕ್ಯೂರಿಟಿ ನೀಡಲಾಗುತ್ತದೆ. ಇಂದು ದಾವಣಗೆರೆ ನಗರಕ್ಕೆ ಛಲವಾದಿ ಮಹಾಸಭಾ ಅಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಲು ಆಗಮಿಸುತ್ತಿರುವ ಪರಮೇಶ್ವರ್ ಅವರಿಗೆ ಝೆಡ್+ ಸೆಕ್ಯೂರಿಟಿ ನೀಡಲಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ ರಸ್ತೆ ಮೂಲಕ ಪರಮೇಶ್ವರ್ ತೆರಳುತ್ತಿದ್ದು, ಹೆದ್ದಾರಿಯಲ್ಲಿಯೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಡಿಸಿಎಂ ಆಗಮನದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೂ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆಯ ಆದೇಶ ಹೊರಡಿಸಿದೆ. ಡಿಸಿಎಂ ಪಾಲ್ಗೊಳ್ಳುವ ಖಾಸಗಿ ಕಾರ್ಯಕ್ರಮಕ್ಕೆ ನಗರ ಸಂಚಾರವನ್ನೇ ಸ್ಥಗಿತಗೊಳಿಸಲು ಹೊರಟ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ದಿನದಿಂದ ದಿನಕ್ಕೆ ತವರು ಜಿಲ್ಲೆ ತುಮಕೂರಿನಲ್ಲಿ ಡಿಸಿಎಂ ಸರಳತೆ ಮೆರೆಯುತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ವಕ್ಷೇತ್ರ ಕೊರಟಗೆರೆ ಪಟ್ಟಣದ ಬೀದಿ ಬದಿಯ ಅಂಗಡಿಯಲ್ಲಿ ಚಹಾ ಹೀರಿ ಸರಳತೆ ಮೆರೆದಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಲಕ್ಷ್ಮಿ ಟೀ ಸ್ಟಾಲ್ ನಲ್ಲಿ ಟೀ ಕುಡಿದಿದ್ದಾರೆ. ನೂರಾರು ಜನ ಬೆಂಬಲಿಗರ ಮಧ್ಯೆ ನಿಂತುಕೊಂಡೇ ಚಹಾ ಕುಡಿದಿದ್ದಾರೆ. ವೈಟ್ ಕಾಲರ್ ರಾಜಕಾರಣಿ ಎಂಬ ಹಣೆಪಟ್ಟಿಯಿಂದ ಮುಕ್ತರಾಗುವ ನಿಟ್ಟಿನಲ್ಲಿ ಜಿ.ಪರಮೇಶ್ವರ್ ಇತ್ತೀಚೆಗೆ ಆದಷ್ಟು ಸಿಂಪಲ್ ಆಗುತ್ತಿರುವುದು ಗಮನಾರ್ಹವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv