ಹುಬ್ಬಳ್ಳಿ: ಪ್ರಿಯಕರ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.
ರೇಖಾ(19) ಹಾಗೂ ವಿಷ್ಣು ಪಗಲಾಪುರ(20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ರೇಖಾ ಹಾಗೂ ವಿಷ್ಣು ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿರೋಧದ ನಡುವೆಯೇ ಕಳೆದ ಐದು ತಿಂಗಳ ಹಿಂದೆ ಇಬ್ಬರ ಮನೆಯವರು ನಿಶ್ಚಿತಾರ್ಥ ಮಾಡಿದ್ದರು.
ಮುಂದಿನ ವರ್ಷ ಏಪ್ರಿಲ್ 24ರಂದು ಇಬ್ಬರ ಮದುವೆ ದಿನಾಂಕವನ್ನು ನಿಶ್ಚಯ ಮಾಡಲಾಗಿತ್ತು. ಬುಧವಾರ ರೇಖಾ, ವಿಷ್ಣುಗೆ ದಿನವಿಡೀ ಕರೆ ಮಾಡಿದ್ದಾಳೆ. ಆದರೆ ವಿಷ್ಣು ಫೋನ್ ಸ್ವೀಕರಿಸಿಲ್ಲ. ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೇಖಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ವಿಷ್ಣು ತನ್ನ ಅಜ್ಜಿಯ ಮನೆಗೆ ತೆರಳಿದಾಗ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.