ರಾಯಚೂರು: ಚುನಾವಣಾ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ರಾಯಚೂರಿನ ಯುವಕನೊರ್ವ ತನ್ನ ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ಮತದಾನ ಮಹತ್ವದ ಪತ್ರಿಕೆಯನ್ನೂ ಮುದ್ರಿಸಿ ಹಂಚುತ್ತಿದ್ದಾರೆ.
ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ರಾಕೇಶ್ ರಾಜಲಬಂಡಿ ಅವರು ಮೇ 4ರಂದು ಮದುವೆಯಾಗುತ್ತಿದ್ದು, ತನ್ನ ಲಗ್ನ ಪತ್ರಿಕೆ ಜೊತೆ ಮತದಾನ ಜಾಗೃತಿ ಪತ್ರಿಕೆಯನ್ನೂ ಮುದ್ರಿಸಿದ್ದಾರೆ.
ಪ್ರಜಾಪ್ರಭುತ್ವದ ಹಬ್ಬವನ್ನ ಮತದಾನದ ಸವಿಯೊಂದಿಗೆ ಆಚರಿಸೋಣ, ತಪ್ಪದೇ ಮತದಾನ ಮಾಡಿ ಎನ್ನುವ ಸಂದೇಶ ಮದುವೆ ಆಮಂತ್ರಣ ಪತ್ರಿಕೆ ಮೇಲಿದೆ. ಎರಡು ಸಾವಿರ ಜನರನ್ನು ಮದುವೆಗೆ ಆಹ್ವಾನಿಸುತ್ತಿರುವುದರಿಂದ ಅಷ್ಟೂ ಜನರಿಗೆ ಮತದಾನ ಕುರಿತು ಸಂದೇಶ ತಲುಪಿಸಿದಂತಾಗುತ್ತದೆ ಎಂದು ರಾಕೇಶ್ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ
ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಮದುವೆಯಾಗುತ್ತಿರುವ ಜೋಡಿ ತಮ್ಮ ಲಗ್ನಪತ್ರಿಕೆಯನ್ನ ವಿಭಿನ್ನ ರೀತಿಯಲ್ಲಿ ಪ್ರಿಂಟ್ ಮಾಡಿಸಿ ಹಂಚಿದ್ದರು. ಸಿದ್ದಪ್ಪ ಜ್ಯೋತಿಯವರನ್ನು ಇದೇ 27ರಂದು ಮದುವೆಯಾದರು. ಆ ಮದುವೆಗೆ ವೋಟರ್ ಐಡಿಯ ಆಮಂತ್ರಣ ಮಾಡಿಸಿದ್ದರು. ಈ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಈ ಟ್ರೆಂಡ್ ಅನ್ನು ಹುಟ್ಟು ಹಾಕಿದ್ದರು.