ಉಡುಪಿ: ಅಪಘಾತಕ್ಕೀಡಾಗಿ ಗಂಭೀರ ಗಾಯಕ್ಕೊಳಗಾಗಿದ್ದ ಯುವಕ ಅಂಬುಲೆನ್ಸ್ನಲ್ಲಿ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಕುಂದಾಪುರದ ಉಳ್ತೂರಿನ ಯುವಕ ಜಯಶೀಲ್ ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಜಯಶೀಲ್ ಗೆ ಎರಡು ವಾರದ ಹಿಂದೆ ಅಪಘಾತವಾಗಿತ್ತು. ಬಲ ಕಾಲಿಗೆ ತೀವ್ರತರನಾದ ಗಾಯವಾಗಿತ್ತು. 3 ತಿಂಗಳುಗಳ ಕಾಲ ರೆಸ್ಟ್ ಮಾಡಲು ವೈದ್ಯರು ಖಡಕ್ ಸೂಚನೆ ನೀಡಿದ್ದರು. ಆದ್ರೆ ಮತ ಹಾಕಲೇಬೇಕು ಎಂದು ಕುಟುಂಬಸ್ಥರಲ್ಲಿ ಯುವಕ ಒತ್ತಾಯಿಸಿದ್ದರು. ಕೊನೆಗೆ ಗೆಳೆಯರೆಲ್ಲ ಸೇರಿ ಅಂಬುಲೆನ್ಸ್ ವ್ಯವಸ್ಥೆ ಮಾಡಿದರು. ಈ ಮೂಲಕ ಮತದಾನಕ್ಕೆ ಹಿಂದೇಟು ಹಾಕುವವರಿಗೆ ಜಯಶೀಲ್ ಮಾದರಿಯಾದರು.
ಸ್ಟ್ರೆಚ್ಚರ್ ನಲ್ಲಿ ಮಲಗಿಕೊಂಡೇ ಮತದಾನ ಮಾಡಿ ಜಯಶೀಲ್ ಪೂಜಾರಿ ಎಲ್ಲರಿಗೂ ಒಂದು ಸಂದೇಶ ರವಾನೆ ಮಾಡಿದ್ದಾರೆ. ಮತದಾನದ ಬೆಲೆ ಏನು ಎಂಬುದನ್ನು ಇವರು ಸಾರಿ ಹೇಳಿದ್ದಾರೆ. ಮತಗಟ್ಟೆ ಅಧಿಕಾರಿಗಳು ಕೂಡಾ ಜಯಶೀಲ್ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ. ನಮ್ಮನ್ನಾಳುವವರನ್ನು ಆಯ್ಕೆ ಮಾಡುವುದು ನಮ್ಮ ಹಕ್ಕು. ಅಯೋಗ್ಯರು, ಯೋಗ್ಯರನ್ನು ಒಂದೊಂದು ಮತದಿಂದ ಬೇರ್ಪಡಿಸಬಹುದು. ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ವೋಟ್ ಮಾಡಿದ್ದೇನೆ. ಮನಸ್ಸಿಗೆ ಖುಷಿಯಾಗಿಗೆ, ನೆಮ್ಮದಿಯಾಗಿದೆ ಎಂದು ಹೇಳಿದರು.