ಮೈಸೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ರಮ್ಮಹಳ್ಳಿ ನಿವಾಸಿಯಾದ ರಜನಿ ಮೃತ ದುರ್ದೈವಿ. ಸುಮಾರು 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕಿಡಿಗೇಡಿ ಯುವಕನ ಪುಂಡಾಟಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಅದೇ ಗ್ರಾಮದ ದೊಡ್ಡಸ್ವಾಮಿ ಎಂಬಾತ ರಜನಿಯನ್ನ ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ. ಯುವಕನ ಪ್ರೀತಿಯನ್ನ ರಜನಿ ತಿರಸ್ಕರಿಸಿದ್ದಳು ಹಾಗೂ ಅಪ್ರಾಪ್ತಳಾದ ಕಾರಣ ಮನೆಯವರೂ ಸಹ ದೊಡ್ಡಸ್ವಾಮಿಯ ಮನವಿಯನ್ನ ತಿರಸ್ಕರಿಸಿದ್ದರು. ಆದರೆ ಪಟ್ಟು ಬಿಡದ ದೊಡ್ಡಸ್ವಾಮಿ ಯುವತಿಯ ಹಿಂದೆ ಬಿದ್ದು ಕಿರುಕುಳ ಕೊಡುತ್ತಿದ್ದ. ಒಂಟಿಯಾಗಿ ಸಿಕ್ಕಾಗ ಫೋಟೋಗಳನ್ನ ತೆಗೆದು ಫೇಸ್ ಬುಕ್ ಗೆ ಹಾಕುವುದಾಗಿ ಬೆದರಿಸಿದ್ದ.
ಇದರಿಂದ ಮನನೊಂದ ರಜನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ರಜನಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.