ಮುಂಬೈ: ಕೆಲ ವರ್ಷಗಳಿಂದ ಮುಂಬೈ (Mumbai) ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಜೊತೆಗಿನ ಸಂಬಂಧ ಹಳಸಿದ್ದರಿಂದ 23 ವರ್ಷದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಗೋವಾ (Goa) ತಂಡಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ.
2025 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ (Jammu Kashmir) ವಿರುದ್ಧ ಸೋತಿತ್ತು. ಸೋತ ನಂತರ ತಂಡ ಸಭೆಯಲ್ಲಿ ರಹಾನೆ ಮತ್ತು ಕೋಚ್ ಓಂಕಾರ್ ಸಾಲ್ವಿ ಅವರು ಜೈಸ್ವಾಲ್ ಅವರನ್ನು ಟಾರ್ಗೆಟ್ ಮಾಡಿದ್ದರು. ಇದರಿಂದ ಸಿಟ್ಟಾದ ಜೈಸ್ವಾಲ್ ರಹಾನೆ ಕಿಟ್ ಬ್ಯಾಗ್ ಅನ್ನು ಒದ್ದಿದ್ದರು.
ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 4 ಮತ್ತು 26 ರನ್ ಹೊಡೆದಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ 120 ರನ್ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್ನಲ್ಲಿ 290 ರನ್ಗಳಿಗೆ ಆಲೌಟ್ ಆಗಿ 5 ವಿಕೆಟ್ಗಳ ಸೋಲನ್ನು ಅನುಭವಿಸಿತ್ತು.
ರಹಾನೆ ಮತ್ತು ತಂಡದ ಕೋಚ್ ಓಂಕಾರ್ ಸಾಲ್ವಿ ಪಂದ್ಯದ ನಂತರ ಜೈಸ್ವಾಲ್ ಅವರ ಆಟದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಆದರೆ ತಂಡದ ಸೋಲಿಗೆ ತನ್ನನ್ನು ಒಬ್ಬನನ್ನೇ ಹೊಣೆ ಮಾಡಿದ್ದಕ್ಕೆ ಜೈಸ್ವಾಲ್ ಸಿಟ್ಟಾಗಿದ್ದರು.
ರಹಾನೆ ಮತ್ತು ಜೈಸ್ವಾಲ್ ನಡುವಿನ ಸಂಬಂಧ ಹಾಳಾಗಲು ಜಮ್ಮು ಕಾಶ್ಮೀರ ವಿರುದ್ಧ ಸೋಲು ಒಂದೇ ಕಾರಣವಲ್ಲ. 2022 ರಲ್ಲಿ ದುಲೀಪ್ ಟ್ರೋಫಿ ಫೈನಲ್ನಲ್ಲಿ ಎದುರಾಳಿ ತಂಡದ ರವಿತೇಜ ಅವರ ಮೇಲೆ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಜೈಸ್ವಾಲ್ ಅವರನ್ನು ಮೈದಾನದಿಂದ ರಹಾನೆ ಹೊರಹೋಗುವಂತೆ ಸೂಚಿಸಿದ್ದರು. ಈ ಘಟನೆಯ ಬಳಿಕ ಜೈಸ್ವಾಲ್ ಮತ್ತು ರಹಾನೆ ನಡುವಿನ ಸಂಬಂಧ ಹಳಸಲು ಆರಂಭವಾಯಿತು.
ಸ್ಲೆಡ್ಜಿಂಗ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಜೈಸ್ವಾಲ್, ಯಾರಿಗೂ ಸ್ಲೆಡ್ಜ್ ಬಗ್ಗೆ ನಿಜವಾಗಿಯೂ ತಿಳಿಯುವುದಿಲ್ಲ.ಯಾರಾದರೂ ನನ್ನ ತಾಯಿ ಅಥವಾ ನನ್ನ ಸಹೋದರಿಯ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಆರ್ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್
ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಿಟ್ಟು ಗೋವಾಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆಡಳಿತ ಮಂಡಳಿ ಅವರ ವಿನಂತಿಯನ್ನು ಸ್ವೀಕರಿಸಿತ್ತು. ಹೀಗಾಗಿ ಜೈಸ್ವಾಲ್ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ. ಇದನ್ನೂ ಓದಿ: ಸಿಡ್ನಿ ಸಿಕ್ಸರ್ ಪರ ಆಡಲಿದ್ದಾರೆ ಕೊಹ್ಲಿ!
ಭಾರತದ ಎಲ್ಲ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಲ್ಲಿಲ್ಲದಿದ್ದಾಗ ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ಕಟ್ಟುನಿಟ್ಟಿನ ನಿರ್ದೇಶನ ಜಾರಿ ಮಾಡಿದೆ. ನಿರ್ದೇಶನದ ಅನ್ವಯ ಜೈಸ್ವಾಲ್ ಕೊನೆಯದಾಗಿ ಜನವರಿ 23-25ರ ಅವಧಿಯಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್ ಎ ಲೀಗ್ ಸುತ್ತಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು.
ಜೈಸ್ವಾಲ್ ಅವರು ಮುಂಬೈನಿಂದ ಗೋವಾಕ್ಕೆ ನಿಷ್ಠೆ ಬದಲಿಸಿದ ಮೂರನೇ ಕ್ರಿಕೆಟರ್ ಆಗಿದ್ದಾರೆ. ಈ ಹಿಂದೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ದೇಶ್ ಲಾಡ್ ಅವರು 2022–23 ರಿಂದ ಗೋವಾ ಪರ ಆಡಿದ್ದರು. ಇವರಲ್ಲಿ ಲಾಡ್ ಅವರು ಎಂಸಿಎ ನಿಯಮದಂತೆ ‘ಕೂಲಿಂಗ್ ಆಫ್’ ಅವಧಿ ಪೂರೈಸಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.