– ಸಾವಿನಲ್ಲೂ ಮೆರೆಯಬಹುದು ಸಾರ್ಥಕತೆ; ಅಂಗಾಂಗ ದಾನದ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?
ಒಬ್ಬ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡು ಬದುಕುಳಿಯಲ್ಲ ಎನ್ನುವಂತಿದ್ದರೆ, ಅಂಗಾಂಗ ದಾನದಿಂದ 8 ಜೀವಗಳನ್ನು ಉಳಿಸಬಹುದು. ಬ್ರೇನ್ ಡೆಡ್ ಆದರೆ ವ್ಯಕ್ತಿ ಸತ್ತಂತೆ. ಮೃತ ವ್ಯಕ್ತಿ ದಾನಿಯಾಗಿದ್ದಲ್ಲಿ ಅವರ ಅಂಗಾಂಗ ದಾನದಿಂದ ಹಲವರ ಜೀವ ಉಳಿಯುತ್ತದೆ. ಅಂಗಾಂಗ ದಾನ ಅನ್ನೋದು ಮಾನವೀಯತೆಯ ಅತ್ಯಂತ ಉದಾತ್ತ ಕಾರ್ಯಗಳಲ್ಲಿ ಒಂದು. ಇನ್ನೊಬ್ಬರಿಗೆ ನೀಡುವ ಜೀವನ ದಾನ. ಆರೋಗ್ಯವಂತ ವ್ಯಕ್ತಿ ಕಣ್ಣು, ಕಿಡ್ನಿ, ಹೃದಯ, ಪಿತ್ತಜನಕಾಂಗ, ಶ್ವಾಸಕೋಶ ಅಂಗಾಂಗಗಳನ್ನು ದಾನ ಮಾಡಿದರೆ, ತುರ್ತು ಅಗತ್ಯ ಇರುವವರಿಗೆ ಹೊಸ ಜೀವನ ಕೊಟ್ಟಂತಾಗುತ್ತದೆ. ದೇಶ, ಜಗತ್ತಿನಲ್ಲಿ ಅಂಗಾಂಗಗಳ ತುರ್ತಿನ ಹೋರಾಟದಲ್ಲಿ ಲಕ್ಷಾಂತರ ಜನರಿದ್ದಾರೆ. ಸೂಕ್ತ ಸಮಯಕ್ಕೆ ಅಂಗಾಂಗ ಸಿಗದೇ ಪ್ರಾಣ ಬಿಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ, ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದೊಂದು ಮಹತ್ಕಾರ್ಯವೆಂದು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಆಗಸ್ಟ್ 13 ಅನ್ನು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತದೆ. ಆದರೆ, ಅಂಗಾಂಗ ದಾನದ ಮಹತ್ವ ಮತ್ತು ಜಾಗೃತಿ ಕೊರತೆ ಎಲ್ಲೆಡೆ ಇದೆ. ಇದಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರ್ಕಾರವು ನಿರಂತರ ಪ್ರಯತ್ನ ನಡೆಸುತ್ತಿದೆ. ಮಿದುಳು ನಿಷ್ಕ್ರಿಯ ನಂತರ ಅಂಗಾಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡಿದ ಕುಟುಂಬದ ಸದಸ್ಯರನ್ನು ಗೌರವಿಸಲು, ಅವರಿಗೆ ಕೃತಜ್ಜತೆ ಸಲ್ಲಿಸಲು ಹಾಗೂ ಆ ಮೂಲಕ ರಾಜ್ಯದ ನಾಗರಿಕರನ್ನು ಪ್ರೇರೇಪಿಸಲು ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಸಹಿ ಇರುವ ಪ್ರಶಂಸಾ ಪತ್ರ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು, ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ.
ವಿಶ್ವ ಅಂಗಾಂಗ ದಿನ ಹೇಗೆ ಬಂತು?
ಜಗತ್ತಿನಲ್ಲೇ ಅಂಗಾಂಗ ದಾನ ಮಾಡಿದ ಮೊದಲ ವ್ಯಕ್ತಿ ರೊನಾಲ್ಡ್ ಲೀ ಹೆರಿಕ್. ಇವರು 1954 ರಲ್ಲಿ ತಮ್ಮ ಅವಳಿ ಸಹೋದರನಿಗೆ ಮೂತ್ರಪಿಂಡವನ್ನು ನೀಡಿದರು. ಈ ಅಂಗ ಕಸಿಯನ್ನು ವೈದ್ಯರಾದ ಡಾ. ಜೋಸೆಫ್ ಮುರ್ರೆ ಯಶಸ್ವಿಯಾಗಿ ನಡೆಸಿದರು. ನಂತರ 1990 ರಲ್ಲಿ ಅಂಗಾಂಗ ಕಸಿಯಲ್ಲಿ ಪ್ರಗತಿಯನ್ನು ತಂದಿದ್ದಕ್ಕಾಗಿ ಅವರಿಗೆ ಶರೀರಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅಂಗಾಂಗ ದಾನದ ಮಹತ್ವವನ್ನು ಸಾರುವುದಕ್ಕಾಗಿ ಆ.13ನ್ನು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತದೆ.
ಭಾರತದಲ್ಲಿ ಅಂಗಾಂಗ ದಿನ ಯಾವಾಗ?
1994ರ ಆಗಸ್ಟ್ 3 ರಂದು ಭಾರತದ ಮೊದಲ ಯಶಸ್ವಿ ಹೃದಯ ಕಸಿ ನಡೆಸಲಾಯಿತು. ಈ ಕಾರ್ಯಕ್ರಮದ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 3 ರಂದು ಭಾರತೀಯ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿವಿಧ ಸಂಸ್ಥೆಗಳ ಜನರು ಅಂಗಾಂಗ ದಾನಿಗಳ ಜೀವನವನ್ನು ಗೌರವಿಸುತ್ತಾರೆ.
ಅಂಗಾಂಗ ದಾನ ದಿನದ ಮಹತ್ವವೇನು?
ಜೀವಗಳನ್ನು ಉಳಿಸುವಲ್ಲಿ ಅಂಗಾಂಗ ದಾನವು ಮಹತ್ವದ ಪಾತ್ರ ವಹಿಸುತ್ತದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಜನರಿಗೆ ಈ ದಾನವು ಹೊಸ ಜೀವನವನ್ನು ನೀಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಾಂಗ ದಾನವನ್ನು ಯಾವುದೇ ವಯಸ್ಸಿನಲ್ಲಿ ಮಾಡಬಹುದು. ಆದರೆ, 18 ವರ್ಷದೊಳಗಿನ ದಾನಿಗಳು ನೋಂದಾಯಿಸಲು ಪೋಷಕ ಪೋಷಕರ ಒಪ್ಪಿಗೆ ಇರಬೇಕು.
ಅಂಗಾಂಗ ದಾನದಲ್ಲಿದೆ 2 ವಿಧ
ಅಂಗ ದಾನದಲ್ಲಿ ಎರಡು ವಿಧಗಳಿವೆ. ಒಂದು ಜೀವಂತ ವ್ಯಕ್ತಿ ನೀಡುವ ದಾನ, ಮತ್ತೊಂದು ಮರಣದ ನಂತರ ನೀಡುವ ದಾನ. ಜೀವಂತ ವ್ಯಕ್ತಿ ನೀಡುವ ದಾನದಲ್ಲಿ ದಾನಿ ಜೀವಂತವಾಗಿರುತ್ತಾನೆ. ಮತ್ತೊಂದರಲ್ಲಿ ವ್ಯಕ್ತಿ ಮರಣದ ನಂತರ ಅಂಗಾಂಗ ದಾನ ಪಡೆಯಲಾಗುತ್ತದೆ. ಜೀವಂತ ದಾನಿಗಳು ಮೂತ್ರಪಿಂಡ ಮತ್ತು ಯಕೃತ್ತಿನ ಭಾಗಗಳಂತಹ ಅಂಗಗಳನ್ನು ದಾನ ಮಾಡಬಹುದು. ದಾನಿಗಳು ಒಂದು ಮೂತ್ರಪಿಂಡದೊಂದಿಗೆ ಬದುಕಬಲ್ಲರು. ಯಕೃತ್ತು ದೇಹದಲ್ಲಿ ಪುನರುತ್ಪಾದನೆಗೆ ಹೆಸರುವಾಸಿಯಾದ ಏಕೈಕ ಅಂಗವಾಗಿದೆ. ಇದು ದಾನಿ ಇನ್ನೂ ಜೀವಂತವಾಗಿರುವಾಗ ಅಂಗಗಳನ್ನು ಕಸಿ ಮಾಡಲು ಸಾಧ್ಯವಾಗಿಸುತ್ತದೆ. ಮಹತ್ವಾಕಾಂಕ್ಷಿ ಅಂಗ ದಾನಿಗಳು ಹೆಚ್ಐವಿ, ಕ್ಯಾನ್ಸರ್, ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯ.
ದಾನ ಮಾಡಬಹುದಾದ ಅಂಗಗಳ್ಯಾವುವು?
ಜೀವಂತ ದಾನಿಗಳಿಂದ ದಾನ ಮಾಡಬಹುದಾದ ಅಂಗಗಳು
* ಒಂದು ಮೂತ್ರಪಿಂಡ
* ಒಂದು ಶ್ವಾಸಕೋಶ
* ಯಕೃತ್ತಿನ ಒಂದು ಭಾಗ
* ಮೇದೋಜೀರಕದ ಒಂದು ಭಾಗ
* ಕರುಳಿನ ಒಂದು ಭಾಗ
ದಾನಿ ಮರಣ ಹೊಂದಿದಾಗ (ಬ್ರೇನ್ ಡೆಡ್) ದಾನ ಮಾಡಬಹುದಾದ ಅಂಗಗಳು
* ಮೂತ್ರಪಿಂಡಗಳು (2)
* ಯಕೃತ್ತು
* ಶ್ವಾಸಕೋಶ (2)
* ಹೃದಯ
* ಮೇದೋಜೀರಕ ಗ್ರಂಥಿ
* ಕರುಳುಗಳು
ನಿತ್ಯ 20 ರೋಗಿಗಳು ಸಾವು
2020 ರ ಮಾರ್ಚ್ ಅಂಕಿಅಂಶಗಳ ಪ್ರಕಾರ, 1,12,000 ಕ್ಕೂ ಹೆಚ್ಚು ಭಾರತೀಯರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿ 10 ನಿಮಿಷಗಳಿಗೊಮ್ಮೆ ರಾಷ್ಟ್ರೀಯ ಕಸಿ ಕಾಯುವ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗೊಳ್ಳುತ್ತಿದೆ. ಭಾರತದಲ್ಲಿ 2020 ರ ಸಂಶೋಧನಾ ವರದಿಯ ಪ್ರಕಾರ, ಪ್ರತಿದಿನ ಅಂಗಾಂಗ ಕಸಿ ಅಗತ್ಯವಿರುವ 20 ರೋಗಿಗಳು ಅಂಗಾಂಗಗಳ ಲಭ್ಯತೆಯ ಕೊರತೆಯಿಂದಾಗಿ ಸಾಯುತ್ತಾರೆ. ಅಂಗಾಂಗ ಕಸಿ ಅಗತ್ಯವಿರುವ ವ್ಯಕ್ತಿಗಳ ಸಂಖ್ಯೆ ಮತ್ತು ದಾನಿಗಳ ಸಂಖ್ಯೆಯ ನಡುವಿನ ಅಂತರವನ್ನು ನಿವಾರಿಸಲು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಪ್ರಮುಖ ಮಾರ್ಗವಾಗಿದೆ.
ಅಂಗಾಂಗ ಕಸಿಯಲ್ಲಿ ಭಾರತಕ್ಕೆ 3ನೇ ಸ್ಥಾನ
ಅಂಗಾಂಗ ಕಸಿಯಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ನಂತರದ ಸ್ಥಾನದಲ್ಲಿ ಭಾರತ ಇದೆ. ಇದು ದೇಶದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸಾಮರ್ಥ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. 2023 ರಲ್ಲಿ ಪ್ರಾರಂಭಿಸಲಾದ ಆಧಾರ್ ಆಧಾರಿತ NOTTO ಆನ್ಲೈನ್ ಪ್ರತಿಜ್ಞೆ ವೆಬ್ಸೈಟ್ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ. 3.30 ಲಕ್ಷಕ್ಕೂ ಹೆಚ್ಚು ನಾಗರಿಕರು ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಇದು ಐತಿಹಾಸಿಕ ಮೈಲಿಗಲ್ಲು.
‘ಜೀವಸಾರ್ಥಕತೆ’
‘ಜೀವಸಾರ್ಥಕತೆ’ (ಕರ್ನಾಟಕದ ಕಸಿ ಪ್ರಾಧಿಕಾರ) 2017 ರಿಂದ ನೋಂದಾಯಿತ ಸೊಸೈಟಿ ಆಗಿದೆ. ಈ ಸಂಸ್ಥೆ ಅಂಗಾಂಗ ದಾನವನ್ನು ಉತ್ತೇಜಿಸುತ್ತದೆ. ಕರ್ನಾಟಕದಲ್ಲಿ ಮಿದುಳು ನಿಷ್ಕ್ರಿಯಗೊಂಡ ದಾನಿ ಕಸಿ ಮಾಡುವಿಕೆಯನ್ನು ಸಂಯೋಜಿಸುತ್ತದೆ. ಜೀವಸಾರ್ಥಕತೆಯ ಧ್ಯೇಯವೆಂದರೆ, ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವ ಉಳಿಸಲು ಅಂಗಾಂಗ ದಾನದ ಮೂಲಕ ಮರುಜೀವ ನೀಡುವುದು. ಜೀವಸಾರ್ಥಕತೆಯನ್ನು 2020 ರಿಂದ SOTTO (State Organ Tissue & Transplant Organisation) ‘ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ ಎಂದು ಮರುನಾಮಕರಣ ಮಾಡಲಾಯಿತು. SOTTO/ಜೀವಸಾರ್ಥಕತೆಯು 2 ರೀತಿಯ ಅನ್ಲೈನ್ ನೋಂದಣಿಯ ವಿವರವನ್ನು ನಿರ್ವಹಿಸುತ್ತಿದೆ (ಅಂಗಾಂಗ ಕಸಿ ಸ್ವೀಕರಿಸುವವರು ಮತ್ತು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವವರು). ವ್ಯಕ್ತಿಯು ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದು. 2025ರ ಜುಲೈ 30ರವರೆಗೆ ಒಟ್ಟಾರೆಯಾಗಿ 43,221 ಮಂದಿ ಸಾರ್ವಜನಿಕರು ಅಂಗಾಂಗದಾನಕ್ಕಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.
ರಾಜ್ಯದಲ್ಲೇ ಧಾರವಾಡಕ್ಕೆ ಮೊದಲ ಸ್ಥಾನ
ಧಾರವಾಡ ಜಿಲ್ಲೆಯಲ್ಲಿ 11,186 ಮಂದಿ ಪ್ರತಿಜ್ಞೆ ಮಾಡಿ, ಜಿಲ್ಲಾಮಟ್ಟದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವವನ್ನು ಉಳಿಸಲು ಬೇಕಾಗುವ ಅವಶ್ಯಕತೆಗೆ ಹೋಲಿಸಿದರೆ, ಮಾನವ ಅಂಗಗಳು ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಕಾರ್ನಿಯಾಗಳು, ಹೃದಯ ಕವಾಟಗಳು, ಚರ್ಮ ಮತ್ತು ವಿವಿಧ ಅಂಗಾಂಶಗಳ ಅಗತ್ಯವಿರುವ ಹಲವಾರು ವ್ಯಕ್ತಿಗಳು ಇದಕ್ಕೆ ಸೇರಿದ್ದಾರೆ.
ರಾಜ್ಯದಲ್ಲಿ ಅಂಗ ಕಸಿಗೆ ಕಾಯುತ್ತಿರುವ ರೋಗಿಗಳೆಷ್ಟು? (30-07-2025 ರಂತೆ)
ಮೂತ್ರಪಿಂಡಗಳು: 4582
ಯಕೃತ್: 583
ಹೃದಯ: 133
ಶ್ವಾಸಕೋಶಗಳು: 31
ಹೃದಯ ಮತ್ತು ಶ್ವಾಸಕೋಶಗಳು: 13
ಯಕೃತ್ ಮತ್ತು ಮೂತ್ರಪಿಂಡ: 23
ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ: 21
ಹೃದಯ ಮತ್ತು ಮೂತ್ರಪಿಂಡ: 1
ಸಣ್ಣ ಕರುಳು: 0
ಒಬ್ಬ ದಾನಿ ಎಷ್ಟು ಜೀವ ಉಳಿಸಬಹುದು?
ಒಬ್ಬ ಅಂಗಾಂಗ ದಾನಿ 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿಯು ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಉಳಿಸಬಹುದು. ಅಂಗಾಂಗ ದಾನಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ದಾನ ಮಾಡಬಹುದಾದ ಅಂಗಾಂಶಗಳೆಂದರೆ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಣ್ಣುಗಳು.
ಸರ್ಕಾರ ಕೈಗೊಂಡಿರುವ ಕ್ರಮಗಳೇನು?
Trauma Care & Emergency Center (TCEC) ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ Non Transplant Organ Retrieval Centre (NTORC)- ಈ ಕೇಂದ್ರಗಳಲ್ಲಿ ಅಂಗಾಂಗಗಳನ್ನು ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಶರೀರದಿಂದ ಪಡೆದು ಕಸಿ ಕೇಂದ್ರಗಳಿಗೆ ಗ್ರೀನ್ ಕಾರಿಡಾರ್ ಮೂಲಕ ತಲುಪಿಸಲಾಗುವುದು. ಪ್ರತಿ ಜಿಲ್ಲಾ ಅಸ್ಪತ್ರೆ & ಮೆಡಿಕಲ್ ಕಾಲೇಜುಗಳಲ್ಲಿ NTORC ಗಳನ್ನು ಸ್ಥಾಪಿಸಲಾಗುವುದು. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು NTORC ಆಗಿ ನೋಂದಣಿ ಪಡೆದಿದ್ದು, 2025 ನೇ ಸಾಲಿನಲ್ಲಿ ಒಂದು ಅಂಗದಾನ ಕಾರ್ಯ ಕೂಡ ನಡೆದಿದೆ. SOTTO/ ಜೀವಸಾರ್ಥಕತೆಯನ್ನು ಸ್ಥಳೀಯ ಉಪಯೋಗಕ್ಕಾಗಿ 5 ವಲಯವನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು. ಮೆದುಳು ನಿಷ್ಕ್ರಿಯ ಹೊಂದಿದ ರೋಗಿಗಳನ್ನು ಗುರುತಿಸಿ ಘೋಷಣೆ ಮಾಡಲು Brain Death Declaration Committee ಗಳನ್ನು ಪ್ರತಿ ಜಿಲ್ಲಾ ಆಸ್ಪತ್ರೆ & ಮೆಡಿಕಲ್ ಕಾಲೇಜುಗಳಲ್ಲಿ ರಚಿಸಲಾಗುವುದು. ಸರ್ಕಾರದ ವತಿಯಿಂದ ಸುವರ್ಣಾ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ಮೂತ್ರಪಿಂಡ, ಹೃದಯ, ಯಕೃತ್ & ಬಹು ಅಂಗಾಂಗಗಳಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ.
ಬಡವರಿಗೆ ಸಹಕಾರಿ
ಅಂಗಾಂಗ ಕಸಿ ಅಗ್ಗದ ಕೆಲಸವಲ್ಲ. ಅದಕ್ಕೆ ತುಂಬಾ ಖರ್ಚಾಗುತ್ತದೆ. ಅಂಗಾಂಗ ಕಸಿ ಅಗತ್ಯವಿರುವ ಬಡವರಿಗೆ ಇದು ದೂರದ ಕನಸು. ಅಂತಹವರಿಗೆ ನೆರವಾಗಲೆಂದು ಸರ್ಕಾರ ಯೋಜನೆವೊಂದನ್ನು ರೂಪಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್ ನಿಗದಿಪಡಿಸಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಪ್ಯಾಕೇಜ್ ದರ ನಿಗದಿ
* ಕಿಡ್ನಿ ಕಸಿಗಾಗಿ: 2 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು ಮೂರು ಲಕ್ಷ ನೀಡಲಾಗುವುದು.
* ಲಿವರ್ ಕಸಿ: 11 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 12 ಲಕ್ಷ ರೂ. ನೀಡಲಾಗುವುದು.
* ಹೃದಯ ಕಸಿ: 10 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 11 ಲಕ್ಷ ರೂ. ನೀಡಲಾಗುವುದು.
* ಶ್ವಾಸಕೋಶ ಕಸಿ: 15 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 16 ಲಕ್ಷ ರೂ. ನೀಡಲಾಗುವುದು.
* ಹೃದಯ & ಶ್ವಾಸಕೋಶ ಕಸಿ: 22.50 ಲಕ್ಷ ರೂ. + ಇಮ್ಯುನೊ ಸಪ್ರೆಶನ್ ವೆಚ್ಚಕ್ಕೆ ಪ್ರತಿ ವರ್ಷ ಒಂದು ಲಕ್ಷ = ಒಟ್ಟು 23.50 ಲಕ್ಷ ರೂ. ನೀಡಲಾಗುವುದು.
ಯಾವ್ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ?
ಸರ್ಕಾರಿ ಆಸ್ಪತ್ರೆಗಳಾದ ನೆಪ್ರೋ-ಯುರಾಲಜಿ ಸಂಸ್ಥೆ, ಬೆಂಗಳೂರು ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ ಕಿಮ್ಸ್, ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ, ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಕಸಿ ಮತ್ತು Institute of Gastro-enterology Sciences & Organ Transplant (IGOT)ನಲ್ಲಿ ಲಿವರ್ ಕಸಿ ಮಾಡಲಾಗುತ್ತಿದೆ.
ವಲಯವಾರು ಅಂಗಾಂಗ ಕಸಿಗೆ ನೋಂದಾಯಿತ ಆಸ್ಪತ್ರೆಗಳ ಸಂಖ್ಯೆ: 82
ಬೆಂಗಳೂರು ವಲಯ: 51
ಮಂಗಳೂರು: 12
ಹುಬ್ಬಳ್ಳಿ/ಧಾರವಾಡ: 07
ಕಲಬುರಗಿ: 04
ಮೈಸೂರು: 08
ದಾನಿಗಳ ಸಂಖ್ಯೆಯಲ್ಲಿ ಏರಿಕೆ
SOTTO Karnataka/ ಜೀವಸಾರ್ಥಕತೆಯ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದ್ದು, 2025 ನೇ ಸಾಲಿನಲ್ಲಿ ಈಗಾಗಲೇ 121 ಅಂಗಾಂಗ ದಾನ ನಡೆದಿದೆ.