ನವದೆಹಲಿ: ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ (Mathura’s Krishna Janmabhoomi Land Dispute) ಪಕ್ಕದಲ್ಲಿರುವ ಶಾಹಿ ಈದ್ಗಾ (Shahi Idgah) ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಗುರುವಾರ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ ಅವರ ಪೀಠವು ಮಸೀದಿ ಸಮಿತಿಯ ಮನವಿಯನ್ನು ನಿರಾಕರಿಸಿತು.
ಅಲಹಾಬಾದ್ ಹೈಕೋರ್ಟ್ (Allahabad High Court) ಡಿಸೆಂಬರ್ 14 ರಂದು ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯ ಮೂವರು ವಕೀಲ ಕಮಿಷನರ್ಗಳ ತಂಡಕ್ಕೆ ಅನುಮತಿಸಿತು. ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಇಂಧನ ಸಚಿವ ಕೆ.ಜೆ ಜಾರ್ಜ್ ಚಿಕ್ಕಮಗಳೂರು ಕಚೇರಿಯಲ್ಲಿ ಕಳ್ಳತನ
ಭೂ ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ಒಗ್ಗೂಡಿಸಿ ವರ್ಗಾಯಿಸುವ ಹೈಕೋರ್ಟ್ನ ಮೇ 2023ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಜನವರಿ 9 ರಂದು ವಿಶೇಷ ರಜೆ ಕಾಲ ಪೀಠವು ವಿಚಾರಣೆಯ ನಡೆಸಲಿದೆ ಎಂದು ನ್ಯಾಯಲಯ ಹೇಳಿದೆ.
ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಮತ್ತು ಅರ್ಜಿಗಳ ವರ್ಗಾವಣೆ ಆದೇಶದ ಸವಾಲಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜನವರಿ 9 ರಂದು ವಿಚಾರಣೆ ನಡೆಸಲಿದೆ ಹೀಗಾಗಿ ಹೈಕೋರ್ಟ್ ಆದೇಶವು ಮುಂದುವರಿಯುತ್ತದೆ. ಸುಪ್ರೀಂಕೋರ್ಟ್ನಿಂದ ಯಾವುದೇ ತಡೆ ಇಲ್ಲ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಶ್ರೀಕೃಷ್ಣನ ಜನ್ಮಸ್ಥಳದ 13.37 ಎಕರೆಯಲ್ಲಿ ದೇವಾಲಯವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಮಸೀದಿಯನ್ನು ನಿರ್ಮಿಸಿದನೆಂದು ಹಿಂದೂಗಳ ಪರ ಅರ್ಜಿದಾರರು ಆರೋಪಿಸಿದ್ದು, ಈದ್ಗಾ ಸಂಕೀರ್ಣಕ್ಕೆ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ನಲ್ಲಿ ಹತ್ತಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಸಲಾಗಿತ್ತು.