ಇಸ್ಲಾಮಾಬಾದ್: ಏನು ಬೇಕಾದರೂ ಆಗಲಿ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಟ್ಟು ಹಿಡಿದಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ಖಾನ್ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ, ಏನು ಬೇಕಾದರೂ ಆಗಲಿ, ನಾನು ರಾಜೀನಾಮೆ ಕೊಡುವುದಿಲ್ಲ. ಹೋರಾಟವಿಲ್ಲದೆ ನಾನು ಎಂದಿಗೂ ಶರಣಾಗುವುದಿಲ್ಲ. ಕೆಲ ದ್ರೋಹಿಗಳ ಒತ್ತಡವನ್ನು ಸುಮ್ಮನೆ ಏಕೆ ಸಹಿಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಅವಿಶ್ವಾಸ ಮುಂದೂಡಿಕೆ:
ಪಾಕಿಸ್ತಾನದ ಪ್ರಧಾನಿ ಇಮ್ರಾನ್ಖಾನ್ ವಿರುದ್ಧ ನಿಗದಿಪಡಿಸಿದ್ದ ಅವಿಶ್ವಾಸ ಗೊತ್ತುವಳಿ ಅಧಿವೇಶನವು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸದ ಖಯಾಲ್ ಜಮಾನ್ ಅವರ ನಿಧನದಿಂದಾಗಿ ಮಾರ್ಚ್ 28ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ತಿಳಿಸಿದ್ದಾರೆ. ಸಂಸತ್ತಿನ ಸಂಪ್ರದಾಯದ ಪ್ರಕಾರ ಮೊದಲ ಅಧಿವೇಶನವು ಅವರಿಗೆ ಗೌರವ ಸಲ್ಲಿಸಲು ಸೀಮಿತವಾಗಿದೆ. ಇದನ್ನೂ ಓದಿ: ಹಿಜಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್ ಖಾನ್
ಇಮ್ರಾನ್ ಖಾನ್ ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನವು ಅಳಿವಿನ ಅಂಚಿನತ್ತ ಸಾಗುತ್ತಿದೆ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ದೂರು ನೀಡಲಾಗಿತ್ತು. ಇದರಿಂದಾಗಿ ಮಾರ್ಚ್ 25ರಂದು ಇಮ್ರಾನ್ ಖಾನ್ ಅವರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇಂದು ಖಯಾಲ್ ಜಮಾನ್ ಅವರ ನಿಧನದ ಕಾರಣದಿಂದಾಗಿ ಸಭೆಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ. ಅಂದು ಸಂಜೆ 4 ಗಂಟೆಗೆ ಅಧಿವೇಶನ ನಡೆಯುವ ಸಾಧ್ಯತೆಯಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಭಾರಿಗೆ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸ್ವಪಕ್ಷದೊಂದಿಗೆ ಪ್ರತಿಪಕ್ಷದ ನಾಯಕರೂ ಭಿನ್ನಮತ ಮರೆತು ಒಂದಾಗಿವೆ. ಕೆಲ ವೇಳೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ತೆಹ್ರೀಕ್-ಎ-ಇನ್ ಸಾಫ್ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ದೂರಿವೆ.
ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿಯೇ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ. ಆರ್ಥಿಕತೆಯನ್ನೂ ಇಮ್ರಾನ್ ಖಾನ್ ಸಮರ್ಪಕವಾಗಿ ನಿರ್ವಹಿಸಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಮನೆಮಾಡಿದ್ದು, ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ವಿರೋಧ ಪಕ್ಷಗಳು ಒಗ್ಗೂಡಲು ಸಹ ಇದು ಮುಖ್ಯಕಾರಣವಾಗಿದೆ ಎಂಬ ಅಂಶವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ
ಪಾಕಿಸ್ತಾನದ ಸಂಸತ್ತು 342 ಸದಸ್ಯಬಲ ಹೊಂದಿದೆ. ಅಧಿಕಾರಕ್ಕೆ ಬರಲು 172 ಸದಸ್ಯ ಬಲ ಅಗತ್ಯವಿದೆ. ಇಮ್ರಾನ್ ಖಾನ್ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ. ಪಿಟಿಐ ಪಕ್ಷದ 155 ಸಂಸದರು ಸಂಸತ್ತಿನಲ್ಲಿದ್ದಾರೆ. ಅವಿಶ್ವಾಸ ಗೊತ್ತುವಳಿಯಲ್ಲಿ ಪಾಲ್ಗೊಳ್ಳುವುದಾಗಿ 3 ಪ್ರಮುಖ ಮಿತ್ರಪಕ್ಷಗಳು ಹೇಳಿಕೆ ನೀಡಿವೆ. ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು 163 ಸ್ಥಾನಗಳನ್ನು ಹೊಂದಿವೆ. ಪಿಟಿಐ ಪಕ್ಷ ತೊರೆದಿರುವ ಸಂಸದರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದರೆ ಇಮ್ರಾನ್ ಖಾನ್ ಸರ್ಕಾರ ಸುಲಭವಾಗಿ ಪತನವಾಗಲಿದೆ. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್ ಖಾನ್ಗೆ ಗಡುವು
ಈ ಹಿಂದೆಯೂ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರೋಧಿಸಿದ್ದರು. ಇದೀಗ ಮತ್ತೆ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಪಾಕಿಸ್ತಾನದ ಆಡಳಿತಗಾರರು ಒತ್ತಡದಲ್ಲಿದ್ದಾಗಲೆಲ್ಲಾ ಭಾರತವನ್ನು ದೂರುವ ಮೂಲಕ ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಯತ್ನಿಸುವುದು ವಾಡಿಕೆಯೇ ಆಗಿದೆ ಎಂದು ಅಂಶದಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಪಾಕಿಸ್ತಾನದಲ್ಲಿ ಮುಂದಿನ ಮಹಾಚುನಾವಣೆಯು 2023ರಂದು ನಡೆಯಬೇಕಿತ್ತು. ಆದರೆ ಅವಧಿಗೆ ಮೊದಲೇ ಚುನಾವಣೆ ನಡೆಯಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.