ಮಡಿಕೇರಿ: ಮಹಿಳೆಯೊಬ್ಬರು ಬಸ್ಸಿನಲ್ಲಿ ಪರ್ಸ್ ಕಳೆದುಕೊಂಡ ಒಂದೇ ಗಂಟೆಗೆ ತಮ್ಮ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ಹಣ ಮಂಗಮಾಯವಾಗಿತ್ತು. ಪರ್ಸ್ ಕಳೆದುಹೋಗಿದೆ ಅನ್ನೋದು ಗೊತ್ತಾಗದ ಮಹಿಳೆಯ ಮೊಬೈಲ್ಗೆ ಹಣ ಡ್ರಾ ಆದ ಮೆಸೇಜ್ ಬಂದಿತ್ತು. ಹಣ ಎಗರಿಸಿದ ಕಳ್ಳಿಯರ ವಿರುದ್ಧ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಕಳ್ಳಿಯರು ಮಾತ್ರ ಸಿಕ್ಕಿಲ್ಲ.
ಅನುರಾಧ ಪರ್ಸ್ ಕಳೆದುಕೊಂಡಿರುವ ಮಹಿಳೆ. ಇವರು ಮಡಿಕೇರಿ ತಾಲೂಕಿನ ಗಾಳೀಬೀಡಿನಲ್ಲಿರುವ ನವೋದಯ ಶಾಲೆ ಉದ್ಯೋಗಿಯಾಗಿದ್ದು, ಒಂದು ವರ್ಷದ ಹಿಂದೆ ಇವರು ಬೆಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಇವರ ಪರ್ಸ್ ಕಳೆದುಹೋಗಿತ್ತು. ಪರ್ಸಿನಲ್ಲೇ ಎಟಿಎಂ ಕಾರ್ಡ್, ಅದರ ಪಿನ್ ನಂಬರ್ ಕೂಡ ಇತ್ತು. ಆದರೆ ಈ ಪರ್ಸ್ ಕಳೆದುಹೋಗಿರುವುದು ಅನುರಾಧ ಅವರ ಗಮನಕ್ಕೆ ಬಂದಿಲ್ಲ.
ಸಂಬಂಧಿಕರ ಮನೆಗೆ ಹೋದಾಗ ಮೊಬೈಲ್ಗೆ ಹಣ ಡ್ರಾ ಆಗಿದ್ದ ಮೆಸೇಜ್ ಬಂದಿದೆ. ಆ ನಂತರವೇ ತಮ್ಮ ಪರ್ಸ್ ಕಳೆದುಹೋಗಿರುವುದು ಗೊತ್ತಾಗಿದೆ. ಅಷ್ಟರಲ್ಲಿ ಪರ್ಸ್ ಕಳೆದು ಹೋಗಿ ಒಂದು ಗಂಟೆ ಆಗಿತ್ತು. ಪರ್ಸ್ ಎಗರಿಸಿದವರು ಬೆಂಗಳೂರಿನ ಬನಶಂಕರಿಯಲ್ಲಿರುವ ಎಸ್ಬಿಐ ಎಟಿಎಂನಿಂದ ಬರೋಬ್ಬರಿ 30 ಸಾವಿರ ಹಣ ತೆಗೆದಿದ್ದಾರೆ. ನಂತರ ವಿಜಯನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಿಂದಲೂ ಹಣ ತೆಗೆದಿದ್ದಾರೆ.
ಎಂಟಿಎಂಗೆ ಬರುವ ಕಳ್ಳಿಯರು ಮೊದಲು ಎರಡು ಬಾರಿ ತಾವೇ ಹಣ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಅಲ್ಲೇ ಇರುವ ಸೆಕ್ಯುರಿಟಿ ಗಾರ್ಡ್ ಕರೆದು ಅವರಿಂದ ಹಣ ತೆಗೆಸಿಕೊಂಡಿದ್ದಾರೆ. ಇದೆಲ್ಲವೂ ಎಟಿಎಂ ಒಳಗೆ ಇರುವ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಎಟಿಎಂ ಒಳಗೆ ಬಂದ ಕಳ್ಳಿಯರು ಬರೋಬ್ಬರಿ ಏಳು ನಿಮಿಷಗಳ ಕಾಲ ಅದರೊಳಗೆ ಇದ್ದು, ಹಣದೋಚಿದ್ದಾರೆ ಎಂದು ಅನುರಾಧ ಸಹೋದರ ಮಂಜುನಾಥ ತಿಳಿಸಿದ್ದಾರೆ.
ನನ್ನ ಯೂನಿಯನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಎರಡು ಎಟಿಎಂಗಳನ್ನು ಬಳಸಿ ಕಳ್ಳಿಯರು 30 ಸಾವಿರ ಹಣ ಡ್ರಾ ಮಾಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೆ ಬೆಂಗಳೂರಿನ ವಿವಿಧ ಮಾಲ್ಗಳಿಗೆ ಹೋಗಿ 20 ಸಾವಿರ ರೂಪಾಯಿಯಲ್ಲಿ ಶೂ, ಬಟ್ಟೆ ಸೇರಿದಂತೆ ತಮಗೆ ಇಷ್ಟಬಂದ ವಸ್ತುಗಳನ್ನು ಖರೀದಿ ಮಾಡಿ ಕಾರ್ಡನ್ನು ಸ್ವೈಪ್ ಮಾಡಿದ್ದಾರೆ ಎಂದು ಅನುರಾಧ ಹೇಳಿದ್ದಾರೆ.
ಬೆಂಗಳೂರಿನಿಂದ ಮಡಿಕೇರಿಗೆ ಬಂದ ಅನುರಾಧ 2019ರ ಮಾರ್ಚ್ 3ರಂದು ಜಿಲ್ಲಾ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಎಟಿಎಂನಿಂದ ಹಣತೆಗೆದಿರುವ ಮಹಿಳೆಯರ ವಿಡಿಯೋ, ಮಾಲ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ಕಾರ್ಡ್ ಸ್ವೈಪ್ ಮಾಡಿರುವ ಎಲ್ಲದರ ದಾಖಲೆ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.