ಬೆಂಗಳೂರು: ಬೆಳಗ್ಗೆ ಎದ್ದು ನರಿ ಮುಖ ನೋಡಿದ್ದರೆ ಒಳ್ಳೆಯದಾಗುತ್ತದೆ ಎಂದು ಮಹಿಳೆಯೊಬ್ಬಳು ನರಿ ಫೋಟೋ ಇಟ್ಟುಕೊಳ್ಳುವ ಬದಲು ಜೀವಂತ ನರಿಯನ್ನು ಸಾಕಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.
ನೆಲಮಂಗಲದ ಮರ್ಸೂರಿನ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಪ್ರತಿನಿತ್ಯ ನರಿ ಮುಖ ನೋಡೋಕೆ ಅಂತ ಜೀವಂತ ನರಿಯನ್ನು ಸಾಕಿಕೊಂಡಿದ್ದಳು. ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಸಿಬ್ಬಂದಿ ದಾಳಿ ನಡೆಸಿ ನರಿಯನ್ನು ರಕ್ಷಿಸಿ ನಂತರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಕೊಂಡೊಯ್ದಿದ್ದಾರೆ.
ನರಿ ಸಾಕುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಅರಣ್ಯಾಧಿಕಾರಿಗಳ ಮುಂದೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಇದು ಅರಣ್ಯವಾಸಿಗಳಿಂದ ನನಗೆ ಸಿಕ್ಕಿತು ಎಂದು ಮಹಿಳೆ ಮಾಹಿತಿ ನೀಡಿದ್ದಾಳೆ.
ನರಿಯನ್ನು ಸಾಕಿಕೊಂಡರೆ ಅದೃಷ್ಟ ಖುಲಾಯಿಸಬಹುದು ಎನ್ನುವ ಕಾರಣಕ್ಕೆ ಜೀವಂತ ನರಿಯನ್ನು ಸಾಕಿಕೊಂಡಿದ್ದೆ ಎಂದು ಮಹಿಳೆ ತಿಳಿಸಿದ್ದಾಳೆ.