ಬೆಂಗಳೂರು: ಮನೆಕೆಲಸದಾಕೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಬೆನ್ನಲ್ಲೇ ಇದೀಗ ಎ2 ಆರೋಪಿ ಸತೀಶ್ ಬಾಬು ಯಾನೆ ಬಾಬಣ್ಣನನ್ನು (Sathish Babanna) ಎಸ್ಐಟಿ ಅಧಿಕಾರಿಗಳು 8 ದಿನಗಳ (ಮೇ 13) ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಅಪಹರಣ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ನ್ಯಾ ರವೀಂದ್ರಕುಮಾರ್ ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಿದರು. ಸತೀಶ್ ಪರ ವಕೀಲರು, ಎಸ್ಐಟಿ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಮಾಹಿತಿ ನೀಡದೇ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ತಕ್ಷಣ ಅಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಕೆಲವು ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಮೂಲಕ ಪೊಲೀಸ್ ಕಸ್ಟಡಿಗೆ ಆಕ್ಷೇಪಣೆ ಮಾಡಿದರು. ಇದನ್ನೂ ಓದಿ: ಹೆಚ್.ಡಿ.ರೇವಣ್ಣ 4 ದಿನ ಎಸ್ಐಟಿ ಕಸ್ಟಡಿಗೆ
ಎಸ್ಐಟಿ ಪರ ವಕೀಲರು, ಪ್ರಕರಣ ತುಂಬಾ ದೊಡ್ಡದಿದೆ. ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ 10 ದಿನ ಕಸ್ಟಡಿಗೆ ಬೇಕು. ಈತನೇ ಪ್ರಕರಣಕ್ಕೆ ಮುಖ್ಯವಾದವನು. ಅಪಹರಣಕ್ಕೆ ಒಳಗಾಗದ ಮಹಿಳೆಯನ್ನು ಕೆ ಆರ್ ನಗರ ಹೊಳೆನರಸೀಪುರ ಎಲ್ಲಾ ಕಡೆ ಸುತ್ತಾಡಿಸಿದ್ದಾನೆ. ಈತನೇ ಮಹಿಳೆಯನ್ನು ಕರೆಕೊಂಡು ಹೋಗಿದ್ದಾನೆ. ಮೊದಲ ಆರೋಪಿ ಜೊತೆ ಬಿಟ್ಟಿದ್ದಾನೆ. ಅಲ್ಲದೇ ಮೊದಲು ಆರೋಪಿ ಪತ್ನಿಯ ಬಳಿಯೂ ಮಾತನಾಡಿಸಿದ್ದಾನೆ. ಕಿಡ್ನಾಪ್ನಲ್ಲಿ ಪಾತ್ರ ಯಾರದ್ದು ಇದೆ ಎಂಬ ಸ್ಪಷ್ಟತೆ ಬೇಕಾಗಿದೆ. ಹೀಗಾಗಿ ಇವರ ಬಳಿ ಮಾಹಿತಿ ಬೇಕು ಎಂದು ತಿಳಿಸಿದ್ದಾರೆ.
ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ನ್ಯಾಯಾಧೀಶರು, ಸತೀಶ್ ಬಾಬು ಅವರನ್ನು 8 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದ್ದಾರೆ.