ಭೋಪಾಲ್: ಯೋಧನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ 22 ವರ್ಷದ ಯುವತಿಯೊಬ್ಬಳು ಭಾವಿ ಪತಿಯ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ದೆವಾಸ್ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಜ್ಯೋತಿ ಧಾಕದ್ ಆತ್ಮಹತ್ಯೆಗೆ ಶರಣಾದ ಯುವತಿ. ಕಾಶ್ಮೀರದಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ 26 ವರ್ಷದ ನಿಲೇಶ್ ಧಾಕದ್ ಡಿಸೆಂಬರ್ 5 ರಂದು ಶ್ರೀನಗರದಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡು ಹುತಾತ್ಮರಾಗಿದ್ದರು.
ನಿಲೇಶ್ ಸಾವಿನ ಸುದ್ದಿ ಕೇಳಿ ಶಾಕ್ ಒಳಗಾಗಿದ್ದ ಜ್ಯೋತಿ ಶನಿವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಬಾರಿ ಗ್ರಾಮಕ್ಕೆ ಬಂದಿದ್ದ ವೇಳೆ ನಿಲೇಶ್, ಜ್ಯೋತಿ ಧಾಕದ್ ಜತೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಹಿರಿಯ ನಿಶ್ಚಯದಂತೆ ಮುಂದಿನ ವರ್ಷದಲ್ಲಿ ಅವರ ಮದುವೆ ನಡೆಯಬೇಕಿತ್ತು.
ನಿಲೇಶ್ ಕಳೆದ ಐದು ವರ್ಷಗಳ ಹಿಂದೆ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಮೊದಲು ಪಂಜಾಬ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದ ಅವರು ನಂತರ ಶ್ರೀನಗರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಕಳೆದ ಆರು ತಿಂಗಳ ಹಿಂದೆ ತಮ್ಮ ಸ್ವಗ್ರಾಮಕ್ಕೆ ಬಂದಿದ್ದ ವೇಳೆ ಮದುವೆ ನಿಶ್ಚಯ ಮಾಡಲಾಗಿತ್ತು.
ನಿಲೇಶ್ ಮೃತ ದೇಹ ಸ್ವಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಸುಮಾರು 10 ಸಾವಿರ ಕ್ಕೂ ಹೆಚ್ಚಿನ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತಿಮ ಸಂಸ್ಕಾರ ನಡೆಯಿತು.