ಬೆಂಗಳೂರು: ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದಲೇ ಕಿರುಕುಳಕ್ಕೊಳಗಾದ ಮಹಿಳೆಯೊಬ್ಬರು ಅವರ ಮನೆಯ ಮುಂದೆಯೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಣಿವೆ ಶಿವಪುರ ಗ್ರಾಮದ ಮಹಾದೇವಮ್ಮ(60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿಯ ಅಣ್ಣ-ತಮ್ಮಂದಿರು ಜಮೀನಿನ ವಿಷಯವಾಗಿ ಹಲವು ಬಾರಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದರು. ಗುರುವಾರ ಸಹ ಬೀದಿಯಲ್ಲೇ ಮಹಾದೇವಮ್ಮನಿಗೆ ಥಳಿಸಿದ್ದು, ಇದರಿಂದ ಮನನೊಂದ ಮಹಾದೇವಮ್ಮ ಡೆತ್ ನೋಟ್ ಬರೆದಿದ್ದಾರೆ. ಅಲ್ಲದೇ ಕಿರುಕುಳ ನೀಡಿದ ಸಂಬಂಧಿಗಳ ಮನೆಯ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾದೇವಮ್ಮನ ಮಗ ಎದುರು ಮನೆಯ ಹುಡುಗಿಯನ್ನು ಪ್ರೀತಿ ಮಾಡಿದ್ದ ಎಂಬ ಕಾರಣಕ್ಕೆ ಗಲಾಟೆ ನಡೆದು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗಲಿಪುರ ಸಮೀಪ ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನಪ್ಪಿದ್ದನು. ಕಳೆದ ಮೂರು ವರ್ಷಗಳಿಂದ ಪತಿಯ ಸಹೋದರರ ಮಕ್ಕಳು ಮಹಾದೇವಮ್ಮನಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದರು. ಶುಕ್ರವಾರ ಸಂಜೆ ಮಹಾದೇವಮ್ಮ ತಮ್ಮ ತೋಟಕ್ಕೆ ತೆರಳುವ ವೇಳೆ ಪತಿಯ ಸಹೋದರನ ಮಕ್ಕಳಾದ ಬಸವರಾಜು, ನಾಗರಾಜು ಸೇರಿದಂತೆ 6 ಜನರ ತಂಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ತಮ್ಮ ಮಾನ ಊರಿನಲ್ಲಿ ಹೋಯಿತು ಎಂದು ಬೇಸತ್ತ ಮಹಾದೇವಮ್ಮ ಸಂಬಂಧಿಕರ ಮನೆಯ ಮುಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸರಿಗೆ ಅನೇಕ ಬಾರಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಎರಡು ದಿನಗಳ ಹಿಂದೆ ಪೊಲೀಸರು ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿ ನಡೆಸಿದ್ದರು. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿಗಳಿಗೆ ಹಣ ಹಾಗೂ ರಾಜಕೀಯ ಬೆಂಬಲವಿದ್ದು, ಹೀಗಾಗಿ ಮೃತಳ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಆಕೆಯ ಸಂಬಂಧಿಕರು ಆರೋಪಿಸಿ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.