ಹೈದರಾಬಾದ್: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪತಿ ಹಾಗೂ ಕೆಲ ಗ್ರಾಮಸ್ಥರು 12 ಕಿ.ಮೀ. ಕ್ರಮಿಸಿ ಅಂಬುಲೆನ್ಸ್ ಸೇವೆ ಪಡೆದಿದ್ದರೂ, ತಾಯಿ ಮಾತ್ರ ಬದುಕುಳಿದು ಮಗು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಅರಣ್ಯ ಪ್ರದೇಶ ವಾಸಿಯಾಗಿರುವ 8 ತಿಂಗಳ ಗರ್ಭಿಣಿ ಜಿದಮ್ಮ (22) ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲು, ಪತಿ ಹಾಗೂ ಗ್ರಾಮಸ್ಥರು ಪಟ್ಟ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿದಮ್ಮ ಅವರ ಗ್ರಾಮದ ಸುತ್ತಮತ್ತಲು ಯಾವುದೇ ಆಸ್ಪತ್ರೆಗಳಿಲ್ಲ. ಗ್ರಾಮದವರೆಗೆ ರಸ್ತೆ ನಿರ್ಮಾಣವಾಗಿಲಿಲ್ಲ. ಹೀಗಾಗಿ ಅಂಬುಲೆನ್ಸ್ ಸೌಲಭ್ಯ ಪಡೆಯಲು ಗ್ರಾಮಸ್ಥರು ಅರಣ್ಯ ಭಾಗದಲ್ಲಿರು ಕಿರಿದಾದ 12 ಕಿ.ಮೀ. ಕ್ರಮಿಸುವುದು ಅನಿವಾರ್ಯ. ಹೆರಿಗೆ ನೋವಿಗೆ ಒಳಗಾಗಿದ್ದ ಜಿದಮ್ಮ ಅವರನ್ನು ಉಳಿಸಿಕೊಳ್ಳಲು ಪತಿ ಆಕೆಯನ್ನು ಸೀರೆಯಿಂದ ಮರೆ ಮಾಡಿ, ಒಂದು ಬಿದಿರಿನ ಬುಟ್ಟಿಯಲ್ಲಿ ಕುಳ್ಳಿರಿಸಿ, ಬುಟ್ಟಿಯ ನಾಲ್ಕು ಬದಿಗೆ ಹಗ್ಗ ಹಾಕಿ ಅದನ್ನು ಬಿದಿರಿನ ಬೊಂಬಿಗೆ ಕಟ್ಟಿ ಇಬ್ಬರು ಹೊತ್ತುಕೊಂಡು ಸಾಗಿದ್ದರು.
ವಿಜಯನಗರಂನಲ್ಲಿ ಇದು ವಿಶೇಷ ಪ್ರಕರಣವಲ್ಲ. ರಸ್ತೆಗಳಿಲ್ಲದ ಗ್ರಾಮಗಳಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಬುಡಕಟ್ಟು ಜನಾಂಗ ಎದುರಿಸುತ್ತಿರುವ ರಸ್ತೆ ಹಾಗೂ ಆರೋಗ್ಯ ಸಮಸ್ಯೆ ಕುರಿತು ನಟ ಹಾಗೂ ಜನ ಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಪ್ರಸ್ತಾಪ ಮಾಡಿದ್ದರು. ಸದ್ಯ ಜಿದಮ್ಮ ಪ್ರಕರಣದ ಕುರಿತು ಆಡಳಿತ ಪಕ್ಷವನ್ನು ತರಾಟೆಗೆ ತಗೆದುಕೊಂಡಿದ್ದಾರೆ.