ಮೈಸೂರು: ಟಿವಿಗಳಲ್ಲಿ ಪ್ರಸಾರವಾಗುವ ಕ್ರೈಂ ಸ್ಟೋರಿಗಳನ್ನು ನೋಡಿ ಮಹಿಳೆಯೊಬ್ಬಳು ಬಸ್ಗಳಲ್ಲಿ ಪ್ರಯಾಣಿಸುವ ವೃದ್ಧ ಮಹಿಳೆಯರನ್ನು ವಂಚಿಸಿ 581 ಗ್ರಾಂ. ಚಿನ್ನಾಭರಣ ದೋಚಿ, ಪೊಲೀಸರ ಅತಿಥಿಯಾಗಿದ್ದಾಳೆ.
ಮೈಸೂರಿನ ಎನ್.ಆರ್ ಮೊಹಲ್ಲಾದ ಗಣೇಶ್ ನಗರದ 28 ವರ್ಷದ ಸುವರ್ಣ ವಂಚಕಿ ಮಹಿಳೆ. ಜ್ಯೂಸ್ ನಲ್ಲಿ ನಿದ್ರೆ ಮಾತ್ರೆಯನ್ನ ಬೆರೆಸಿ ಇಟ್ಟುಕೊಳ್ಳುತ್ತಿದ್ದ ಸುವರ್ಣ, ಬಸ್ ನಲ್ಲಿ ತೆರಳುವಾಗ ಅಪರಿಚಿತ ವೃದ್ಧ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಜ್ಯೂಸ್ ಕುಡಿಸುತ್ತಿದ್ದಳು. ಬಳಿಕ ಅವರು ಪ್ರಜ್ಞಾಹೀನರಾದ ನಂತರ ಅವರು ಧರಿಸಿರುವ ಚಿನ್ನಾಭರಣ ದೋಚುತ್ತಿದ್ದಳು.
ಜನವರಿ 30 ರಂದು ಮೈಸೂರಿನ ರೂಪಾನಗರದ ದಾಕ್ಷಾಯಿಣಿ ಎಂಬವರಿಗೆ ಜ್ಯೂಸ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿ 80 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ಚಿನ್ನಾಭರಣ ಕಳೆದುಕೊಂಡ ದಾಕ್ಷಾಯಿಣಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ಮುನಿಯಪ್ಪ ವಿಶೇಷ ತನಿಖಾ ತಂಡ ರಚಿಸಿದ್ದರು.
ಈ ತಂಡ ಚಾಲಾಕಿ ಸುವರ್ಣಳನ್ನು ಬಂಧಿಸಿದೆ. ಘಟನೆ ನಡೆದ ದಿನ ಬಸ್ ನಿಲ್ದಾಣದಲ್ಲಿ ಸುವರ್ಣ ಓಡಾಡಿದ ಹಾಗೂ ದಾಕ್ಷಾಯಿಣಿ ಅವರ ಜೊತೆ ಮಾತನಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ವಂಚಕಿ ಸುವರ್ಣಳನ್ನು ಪೊಲೀಸರು ಬಂಧಿಸಿದ್ದಾರೆ.
ಸುವರ್ಣಳನ್ನು ವಿಚಾರಣೆಗೆ ಒಳಪಡಿಸಿದಾಗ ಮೈಸೂರು, ಬೆಂಗಳೂರು, ಮಂಡ್ಯ, ಮದ್ದೂರು ಸೇರಿದಂತೆ ವಿವಿಧೆಡೆ 13 ಅಮಾಯಕರಿಗೆ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾಳೆ. ವಿಚಾರಣೆ ವೇಳೆ ಟಿವಿಗಳಲ್ಲಿ ಪ್ರಸಾರವಾಗುವ ಕ್ರೈಂ ಸ್ಟೋರಿಗಳನ್ನು ವೀಕ್ಷಿಸಿ ಸ್ಕೆಚ್ ಹಾಕಿ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾಳೆ.
ಆರೋಪಿಯಿಂದ 18 ಲಕ್ಷ ಮೌಲ್ಯದ 581 ಗ್ರಾಂ ಚಿನ್ನಾಭರಣ, ನಿದ್ರೆ ಮಾತ್ರೆಗಳು, ತಂಪು ಪಾನೀಯದ ಬಾಟಲಿಗಳು, ಕಟ್ಟಿಂಗ್ ಪ್ಲೇಯರ್ ವಶಪಡಿಸಿಕೊಳ್ಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv