ನವದೆಹಲಿ: ಚಲಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನದ ಒಳಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈಓವರ್ ನಲ್ಲಿ ನಡೆದಿದೆ.
ಭಾನುವಾರ ಸಂಜೆ ಸುಮಾರು 6.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ದೆಹಲಿಯ ನಿವಾಸಿಗಳಾದ ರಂಜನಾ ಮಿಶ್ರಾ, ರಿಧಿ ಹಾಗೂ ನಿಕ್ಕಿ ಮೃತ ದುರ್ದೈವಿಗಳು. ಭಾನುವಾರ ಸಂಜೆ ಅಕ್ಷರಧಾಮ ದೇವಾಲಯಕ್ಕೆ ರಂಜನಾ, ಪತಿ ಉಪೇಂದ್ರ ಮಿಶ್ರಾ ಹಾಗೂ ಅವರ ಮೂವರು ಮಕ್ಕಳು ಕಾರಿನಲ್ಲಿ ತೆರೆಳುತ್ತಿದ್ದರು. ಈ ವೇಳೆ ಅಕ್ಷರಧಾಮ ಫ್ಲೈಓವರ್ ಮೇಲೆ ಬರುತ್ತಿರುವಾಗ ಕಾರಿನಲ್ಲಿ ಗ್ಯಾಸ್ ಲೀಕ್ ಆದ ಕಾರಣ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರು ಚಲಾಯಿಸುತ್ತಿದ್ದ ಪತಿ, ತನ್ನ ಪಕ್ಕದಲ್ಲೇ ಕೂತಿದ್ದ ಮೂರನೇ ಮಗಳನ್ನು ಎತ್ತಿಕೊಂಡು ಹೊರಗಡೆ ಹಾರಿದ್ದಾರೆ. ಆದ್ರೆ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರಣಕ್ಕೆ ಅವರನ್ನು ಕಾಪಾಡುವಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಮೂವರು ಕೂಡ ಸಜೀವದಹನವಾಗಿದ್ದಾರೆ.
ಕಾರಿಗೆ ಬೆಂಕಿ ಹೇಗೆ ತಗುಲಿತು ಅಂತ ನನಗೆ ಗೊತ್ತಿಲ್ಲ ಎಂದು ಶಾಕ್ನಲ್ಲಿ ಉಪೇಂದ್ರ ಮಿಶ್ರಾ ಹೇಳುತ್ತಿದ್ದಾರೆ. ಸದ್ಯ ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv