ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಗ್ರಾಡಳಿತವನ್ನು ಜಾರಿಗೆ ತಂದಿರುವ ತಾಲಿಬಾನಿಗಳ ಕೆಟ್ಟ ಕಣ್ಣು ಈಗ ಭಾರತದ ಕಾಶ್ಮೀರದ ಮೇಲೆ ಬಿದ್ದಿದೆ. ನಾವು ಕಾಶ್ಮೀರಿ ಮುಸ್ಲಿಮರಿಗಾಗಿ ಧ್ವನಿ ಎತ್ತುತ್ತೇವೆ ಎಂದು ತಾಲಿಬಾನ್ ಬಹಿರಂಗವಾಗಿ ಹೇಳಿಕೊಂಡಿದೆ.
ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಪ್ರತ್ಯೇಕ ಸ್ಥಾನಮಾನವನ್ನು ಭಾರತ ಸರ್ಕಾರ ಹಿಂಪಡೆದ ನಂತರ ಅಲ್ಲಿನ ಮುಸ್ಲಿಮರು ಸಿಟ್ಟಾಗಿದ್ದಾರೆ. ಅವರಿಗೆ ಧ್ವನಿಯಾಗುವ ಕೆಲಸ ಮಾಡುತ್ತೇವೆ, ಹೋರಾಡುತ್ತೇವೆ ಎಂದು ಹೇಳಿದೆ. ಕೆಳದಿನಗಳ ಹಿಂದೆ ಪಾಕ್ ಟಿವಿ ಚಾನಲ್ ಒಂದರ ಚರ್ಚೆಯಲ್ಲಿ ಆಡಳಿತ ಪಕ್ಷ ಪಿಟಿಐ ಪ್ರತಿನಿಧಿ, ತಾಲಿಬಾನ್ ನಮ್ಮ ಬೆಂಬಲಕ್ಕೆ ಇದೆ ಎಂದು ಘಂಟಾಘೋಷವಾಗಿ ಸಾರಿದ್ದರು. ಕಾಶ್ಮಿರದ ವಿಮುಕ್ತಿಗಾಗಿ ಅವರು ನಮಗೆ ನೆರವು ನೀಡುತ್ತಾರೆ ಎಂದಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಇದನ್ನೂ ಓದಿ: ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು
ಅಫ್ಘಾನಿಸ್ತಾನದಲ್ಲಿ ಅಧಿಕೃತವಾಗಿ ಉಗ್ರಾಡಳಿತ ಆರಂಭವಾಗಲು ಕೌಂಟ್ಡೌನ್ ಶುರುವಾಗಿದೆ. ಇರಾನ್ ಮಾದರಿಯಲ್ಲಿ ಅಫ್ಘಾನಿಸ್ತಾನದ ಸರ್ವೋಚ್ಛ ನಾಯಕರನ್ನಾಗಿ ತಾಲಿಬಾನ್ ಸುಪ್ರೀಂ ಅಖುಂಡಾಜಾದ್ ಹೆಸರನ್ನು ಘೋಷಿಸುವ ಸಂಭವ ಇದೆ. ತಾಲಿಬಾನ್ ಸರ್ಕಾರದ ಮುಖ್ಯಸ್ಥನನ್ನಾಗಿ ಮುಲ್ಲಾ ಬರಾದರ್ ಹೆಸರನ್ನು ಅಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಮಗ ಮುಲ್ಲಾ ಯಾಕೂಬ್, ಸಿರಾಜುದ್ದೀನ್ ಹಕ್ಕಾನಿ ಮತ್ತು ಷೇರ್ ಮಹಮ್ಮದ್ ಸ್ಟಾನ್ಜಾಯ್ಗೂ ಪ್ರಮುಖ ಜವಾಬ್ದಾರಿಗಳು ಸಿಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಶುಕ್ರವಾರದ ನಮಾಜ್ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ
ಮಹಿಳೆಯರನ್ನು ಸರ್ಕಾರದಿಂದ ಹೊರಗಿಡಲು ತಾಲಿಬಾನ್ ತೀರ್ಮಾನಿಸಿದೆ. ಆದರೆ ಇದನ್ನು ಪ್ರಶ್ನಿಸಿ ಮಹಿಳೆಯರು ಕಾಬೂಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರ ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ಭರವಸೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಪಂಜಶೀರ್ ಪ್ರಾಂತ್ಯ ತಾಲಿಬಾನಿಗಳ ಪಾಲಿಗೆ ಕೈಗೆಟುಕದ ದ್ರಾಕ್ಷಿಯಂತಾಗಿದೆ. ತಾಲಿಬಾನ್ ವಶದಲ್ಲಿದ್ದ ಎರಡು ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಹೀಗಾಗಿ ತಾಲಿಬಾನ್ ರಾಕೆಟ್ ದಾಳಿ ನಡೆಸುತ್ತಿದೆ. ಚರಿಕಾರ್ ನಗರದಲ್ಲಿ ಭಾರೀ ಸ್ಫೋಟ ಉಂಟಾಗಿದೆ. ಆದರೆ ಇದಕ್ಕೆಲ್ಲ ಜಗ್ಗದ ಉತ್ತರದ ಪ್ರತಿರೋಧ ಪಡೆ, ನಮ್ಮ ಕಣಿವೆ ಅತಿಕ್ರಮಿಸಲು ಬಂದರೆ ತಾಲಿಬಾನಿಗಳನ್ನು ನೇರ ನರಕಕ್ಕೆ ಕಳಿಸೋದಾಗಿ ಅಬ್ಬರಿಸಿದೆ.