ಬಾಲಿವುಡ್ ಹೆಸರಾಂತ ನಟ ರಣಬೀರ್ ಕಪೂರ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಆಡಿದ ಆ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೇ, ಚರ್ಚೆಗೂ ಅದು ಕಾರಣವಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣಬೀರ್ ಗೆ ‘ಪಾಕಿಸ್ತಾನ ಜೊತೆ ಸಿನಿಮಾ ಮಾಡುವಿರಾ?’ ಎಂದು ಪ್ರಶ್ನೆಯೊಂದು ತೂರಿ ಬಂತು. ಕ್ಷಣವೂ ಯೋಚಿಸದೇ ತಾವು ಸಿನಿಮಾ ಮಾಡುವುದಾಗಿ ಹೇಳಿದರು.
ಮುಂದುವರೆದು ಮಾತನಾಡಿದ ರಣಬೀರ್, ‘ಕಲಾವಿದರಿಗೆ ಯಾವುದೇ ಗಡಿ ಮತ್ತು ಗೋಡೆಯ ಗೊಡವೆ ಇರಬಾರದು. ಕಲಾವಿದರಿಗೆ ಯಾವುದೇ ಬೌಂಡರಿ ಇಲ್ಲ. ಹಾಗಾಗಿ ಅಂಥದ್ದೊಂದು ಅವಕಾಶ ಸಿಕ್ಕರೆ ಕಂಡಿತಾ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ರಣಬೀರ್ ಈ ವಿಷಯದ ಕುರಿತು ಮಾತನಾಡುತ್ತಿದ್ದಂತೆಯೇ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ನಿನಗೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಆ ದೇಶದ ಪೌರತ್ವ ಪಡೆದುಕೊಂಡು ಅಲ್ಲಿಯೇ ಇರು ಎಂದು ಕೆಲವರು ಖಾರವಾಗಿಯೇ ನುಡಿದಿದ್ದಾರೆ. ದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
ಇನ್ನೂ ಕೆಲವರು ರಣಬೀರ್ ಪರವಾಗಿಯೂ ನಿಂತಿದ್ದು, ಕಲಾವಿದನಿಗೆ ಗಡಿ ರೇಖೆಗಳು ಇಲ್ಲ. ಅವರು ಸಾಂಸ್ಕೃತಿಕ ರಾಯಭಾರಿಗಳು. ಹಾಗಾಗಿ ಅವರ ಮಾತನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಳ್ಳಬೇಡಿ ಎಂದು ಅವರ ಫ್ಯಾನ್ಸ್ ಮನವಿ ಮಾಡಿದ್ದಾರೆ. ಜೊತೆಗೆ ಯಾವ ಕಲಾವಿದ, ಎಲ್ಲಿಗೆ ಬೇಕಾದರೂ ಹೋಗಬಹುದು. ಅವರು ಸ್ವತಂತ್ರರು. ರಣಬೀರ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸಾಂಸ್ಕೃತಿಕ ಕೊಡುಕೊಳ್ಳುವಿಕೆ ನಡೆಯಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಒಟ್ನಲ್ಲಿ ರಣಬೀರ್ ಆಡಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧದ ಬೆಂಕಿ ಹೊತ್ತಿಕೊಂಡಿದೆ. ಕೆಲವರಂತೂ ರಣಬೀರ್ ಮೇಲೆ ದೇಶದ್ರೋಹಿ ಕೇಸ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಇವರ ಮನಸ್ಥಿತಿಯನ್ನು ಅರಿತು, ರಣಬೀರ್ ಅವರ ಸಿನಿಮಾವನ್ನು ಬೈಕಾಟ್ ಮಾಡಿದ್ದೆವು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.