ಕಿಚ್ಚ (Kiccha) ಸುದೀಪ್ (Sudeep) ಇಂದು ಬಿಜೆಪಿಗೆ (BJP) ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರ ರಾಜಕೀಯದ ಪಡಸಾಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಈ ಕುರಿತು ಸುದೀಪ್ ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ, ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ ಕಿಚ್ಚ ಬಿಜೆಪಿಗೆ ಬರುವುದು ಕನ್ಫರ್ಮ್. ಆದರೆ, ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರಾ ಅಥವಾ ಅಧಿಕೃತವಾಗಿ ಪಕ್ಷವನ್ನು ಸೇರುತ್ತಿದ್ದಾರೆ ಎನ್ನುವ ಗೊಂದಲವಿದೆ. ಈ ಗೊಂದಲಕ್ಕೆ ಮಧ್ಯಾಹ್ನ ತೆರೆಬೀಳಲಿದೆ. ಇದನ್ನೂ ಓದಿ:ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ರಾಜುಗೌಡ, ‘ಸುದೀಪ್ ನನ್ನ ಸಹೋದರನಿದ್ದಂತೆ. ಅವರೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದೇನೆ. ಎರಡ್ಮೂರು ಬಾರಿ ನಾನು ಕೂಡ ಬಿಜೆಪಿಗೆ ಸೇರುವಂತೆ ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಅವರು ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತ ಪಡಿಸಿರಲಿಲ್ಲ. ಇಂದು ಮಾಧ್ಯಮಗಳಲ್ಲಿ ಸುದ್ದಿ ನೋಡಿ, ನಾನೇ ಅವರಿಗೆ ಬೆಳಗ್ಗೆ ಫೋನ್ ಮಾಡಿದ್ದೆ. ಒಂದು ರೀತಿಯಲ್ಲಿ ಸಸ್ಪನ್ಸ್ ಸಿನಿಮಾದಂತೆ ಆ ವಿಷಯವನ್ನು ಇಟ್ಟಿದ್ದಾರೆ’ ಎಂದಿದ್ದಾರೆ.
ಈ ಹಿಂದೆ ರಮ್ಯಾ ಮೂಲಕ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಕೂಡ ನಡೆದಿತ್ತು. ಸುದೀಪ್ ಮನೆಗೆ ಸ್ವತಃ ಡಿ.ಕೆ. ಶಿವಕುಮಾರ್ (D.K. Shivakumar) ಭೇಟಿ ನೀಡಿ ಚರ್ಚೆ ನಡೆಸಿದ್ದರು. ಅಲ್ಲದೇ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಕಾಂಟ್ಯಾಕ್ಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಎಲ್ಲ ಸಂದರ್ಭದಲ್ಲೂ ಕಿಚ್ಚ ರಾಜಕೀಯ ಪ್ರವೇಶ ಮಾಡಿಲ್ಲ ಎಂದೇ ಹೇಳಿದ್ದರು. ಆ ಮಾತನ್ನು ಇವತ್ತು ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕು.