ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದಾರೆ. ತಮ್ಮ ಭಾಷಣದಲ್ಲಿ ತಮ್ಮ ಈ ವಿಚಾರದಲ್ಲಿ ಬೇರೆಯವರು ಮಧ್ಯ ಪ್ರವೇಶ ಮಾಡಿದರೆ ರಷ್ಯಾ ಕೂಡಲೇ ಪ್ರತಿದಾಳಿ ನಡೆಸಲಿದೆ ಮತ್ತು ಇತಿಹಾಸದಲ್ಲಿ ಕೇಳರಿಯದ ರೀತಿ ತಿರುಗೇಟು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಲ್ಲಿ ಉಕ್ರೇನ್ ಮೇಲೆ ರಷ್ಯಾದ ಕಣ್ಣು ಯಾಕೆ? ಉಕ್ರೇನ್ ಎಷ್ಟು ಶ್ರೀಮಂತ ಇತ್ಯಾದಿ ವಿಚಾರಗಳ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ.
ಪ್ರಜಾಪ್ರಭುತ್ವ ದೇಶ:
ರಷ್ಯಾ-ಉಕ್ರೇನ್ ನಿವಾಸಿಗಳ ಧರ್ಮ, ಆಚಾರ, ವಿಚಾರ, ಆಹಾರ, ಉಡುಗೆ ಎಲ್ಲವೂ ಒಂದೇ. ಇದರ ಜೊತೆ ಉಕ್ರೇನ್ನಲ್ಲಿ ಫಲವತ್ತಾದ ಭೂಮಿ, ಖನಿಜ ಸಂಪತ್ತು ಹೇರಳವಾಗಿದೆ. ಪ್ರಾಚೀನ ನಾಗರಿಕತೆಯ ಪರಂಪರೆ ಉಳ್ಳ ಉಕ್ರೈನ್, ಕಮ್ಯುನಿಸ್ಟ್ ಸೋವಿಯತ್ ತೆಕ್ಕೆಯಲ್ಲಿ ಬಹುಕಾಲ ಇತ್ತು. 1991 ರಲ್ಲಿ ಸೋವಿಯತ್ ಪತನವಾಗಿ 15 ಹೋಳುಗಳಾದಾಗ ಮರಳಿ ಜನಿಸಿದ ಉಕ್ರೈನ್ ಸಮೃದ್ಧವಾಗಿ ಬೆಳೆಯತೊಡಗಿತು.
ಸ್ಟಾಲಿನ್ನಂತಹ ಸರ್ವಾಧಿಕಾರಿಯ ಕಾಲದಲ್ಲಿ ಉಕ್ರೇನ್ನಲ್ಲಿ ಬರಗಾಲವನ್ನುಂಟುಮಾಡಿ ಉಕ್ರೇನಿಯನ್ನರನ್ನು ಉಪವಾಸದಲ್ಲಿರಿಸಿ, ಸಾಯಿಸಿ, ಆ ಜಾಗದಲ್ಲಿ ರಷ್ಯನ್ನರನ್ನು ವಲಸೆ ಕಳುಹಿಸಿದಂತಹ ಕೆಲಸವನ್ನೂ ರಷ್ಯಾ ಮಾಡಿತ್ತು. ರಷ್ಯಾದ ಹಿಡಿತದಲ್ಲಿದ್ದಷ್ಟು ದಿನವೂ ರಷ್ಯನ್ ನುಡಿಯ ಹೇರಿಕೆಯನ್ನು ಅನುಭವಿಸಿದ್ದ ಉಕ್ರೇನ್ ಸೋವಿಯತ್ ಪತನದ ಬಳಿಕ ಒಂದು ಆಧುನಿಕ ಪ್ರಜಾಪ್ರಭುತ್ವ ದೇಶವಾಗಿ ಬೆಳೆಯತೊಡಗಿತು.
ರಷ್ಯಾದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ತನ್ನ ಎದುರಾಳಿಗಳನ್ನು ಕೊಂದು ಇಲ್ಲವೇ ಜೈಲಿಗೆ ದಬ್ಬಿ ಮೆರೆಯುತ್ತಿದ್ದ ಪುಟಿನ್ಗೆ ಪಕ್ಕದಲೇ ಒಂದು ಯಶಸ್ವಿ ಪ್ರಜಾಪ್ರಭುತ್ವ ನೆಲೆಯಾಗಿ ಉಕ್ರೇನ್ ಬದಲಾಗುತ್ತಿರುವುದು ಇಷ್ಟವಾಗುತ್ತಿರಲಿಲ್ಲ. ಉಕ್ರೇನಿಯನ್ನರನ್ನು ನೋಡಿ ಎಲ್ಲಿ ರಷ್ಯನ್ನರು ಬಂಡೇಳುತ್ತಾರೋ ಎನ್ನುವ ಆತಂಕ ರಷ್ಯಾಗೆ ಇತ್ತು. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಪುಟಿನ್ ಮಾಡಿದ್ದು ಏನು?
ಸಂಪತ್ಭರಿತ ದೇಶವಾಗಿರುವ ಉಕ್ರೇನ್ ಮೇಲೆ ಕಣ್ಣು ಹಾಕಿದ್ದ ಪುಟಿನ್ ಉಕ್ರೇನ್ನಲ್ಲಿರುವ ಬಂಡಾಯ ಹೋರಾಟಗಾರರಿಗೆ ಸಹಕಾರ ನೀಡತೊಡಗಿದರು. ಒಂದು ದೇಶವನ್ನು ಕೆಡವಬೇಕಾದರೆ ಆ ದೇಶದ ಸರ್ಕಾರದ ವಿರುದ್ಧವೇ ಜನರನ್ನು ದಂಗೆ ಏಳುವಂತೆ ಮಾಡುವು ತಂತ್ರ ಹೊಸದೆನಲ್ಲ. ಈ ತಂತ್ರವನ್ನೇ ಬಳಸಿಕೊಂಡ ರಷ್ಯಾ ಉಕ್ರೇನ್ ಬಂಡಾಯ ಹೋರಾಟಗಾರರಿಗೆ ಆರ್ಥಿಕ ಸಹಕಾರ, ಶಸ್ತ್ರಾಸ್ತ್ರವನ್ನು ನೀಡಿ ಬಂಡಾಯ ಏಳುವಂತೆ ಮಾಡಿ ಯಶಸ್ವಿಯಾಯಿತು.
ನ್ಯಾಟೋ ಸಹಕಾರ:
ರಷ್ಯಾದಿಂದ ಕಿರಿಕ್ ಜಾಸ್ತಿ ಆಗುತ್ತಿದ್ದಂತೆ ಉಕ್ರೇನ್ ಯುರೋಪ್ ರಾಷ್ಟ್ರಗಳ ಪರ ವಾಲತೊಡಗಿತು. ಯುರೋಪಿನ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇರಲು ಯತ್ನಿಸುತ್ತಿದ್ದಂತೆ ಪುಟಿನ್ ಸಿಟ್ಟಿಗೆ ಕಾರಣವಾಗಿತು. ಯಾವುದೇ ಕಾರಣಕ್ಕೂ ಉಕ್ರೇನ್ ನ್ಯಾಟೋಗೆ ಸೇರಬಾರದು ಮೊದಲು ಹೇಗಿತ್ತೋ ಅದೇ ರೀತಿಯಾಗಿ ಮುಂದುವರಿಯಬೇಕು ಎನ್ನುವುದು ಪುಟಿನ್ ವಾದ. ಈ ವಾದಕ್ಕೆ ಉಕ್ರೇನ್ ಸೊಪ್ಪು ಹಾಕದ ಕಾರಣ ಪುಟಿನ್ ಈಗ ಯುದ್ಧ ಘೋಷಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ರಷ್ಯಾಗೆ ಭಯ ಯಾಕಿಲ್ಲ?
ಪ್ರಸ್ತುತ ವಿಶ್ವದ ಸೂಪರ್ ಪವರ್ ದೇಶವಾದ ಅಮೆರಿಕ ಈಗಾಗಲೇ ಕೋವಿಡ್ನಿಂದ ಆರ್ಥಿಕವಾಗಿ ಭಾರೀ ನಷ್ಟವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಯುರೋಪ್ ದೇಶಗಳು ಕೊರೊನಾದಿಂದ ಈಗಷ್ಟೇ ಚೇತರಿಕೆ ಕಾಣುತ್ತಿದೆ.
ಆರ್ಥಿಕತೆ ನೆಲಕಚ್ಚಿರುವ ಯುರೋಪ್ ದೇಶಗಳು ಯುದ್ಧಕ್ಕೆ ಆಸಕ್ತಿ ತೋರಿಸಿದರೂ ಭಾರೀ ನಷ್ಟ ಅನುಭವಿಸಲಿದೆ. ರಷ್ಯಾಗೆ ವಿವಿಧ ದೇಶಗಳು ನಿರ್ಬಂಧ ಹೇರಿದರೂ ರಷ್ಯಾ ಈಗಾಗಲೇ ತನ್ನ ಕಾಲ ಮೇಲೆ ನಿಂತುಕೊಂಡಿದೆ. ತೈಲವನ್ನು ತಾನೇ ಉತ್ಪಾದನೆ ಮಾಡುತ್ತದೆ. ಆಹಾರ ಸಾಮಾಗ್ರಿಗಳಿಗೆ ಯಾವುದೇ ಸಮಸ್ಯೆ ಆಗಲಾರದು. ಇದನ್ನೂ ಓದಿ: Russia-Ukraine Crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
ಉಕ್ರೇನ್ ಮೇಲಿನ ಯುದ್ಧ ಘೋಷಣೆಯ ಭಾಷಣದಲ್ಲಿ ಪುಟಿನ್ ದೇಶದ ಆರ್ಥಿಕತೆಯ ಬಗ್ಗೆ ಪುಟಿನ್ ಗಮನ ಹರಿಸದೇ ಇರುವ ವಿಚಾರ ಸ್ಪಷ್ಟವಾಗುತ್ತದೆ. ಆರ್ಥಿಕತೆ ಪೆಟ್ಟು ಬಿದ್ದರೂ ಉಕ್ರೇನ್ ವಶಪಡಿಸಲೇಬೇಕೆಂಬ ಹಠಕ್ಕೆ ಪುಟಿನ್ ಬಿದ್ದಿದ್ದಾರೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ಚೀನಾ ಈಗಾಗಲೇ ರಷ್ಯಾಗೆ ಸಹಕಾರ ನೀಡಿದೆ. ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಹೊಂದಿರುವ ಏಕೈಕ ರಾಷ್ಟ್ರ ರಷ್ಯಾ. ಮಿಲಿಟರಿ, ವಾಯು, ನೌಕಾ ಸೇನೆ ವಿಚಾರದಲ್ಲೂ ರಷ್ಯಾ ಪ್ರಭಲ ದೇಶವಾಗಿ ಹೊರಹೊಮ್ಮಿದೆ. ಈ ಎಲ್ಲ ಕಾರಣದಿಂದ ಪುಟಿನ್ ಅಮೆರಿಕ, ನ್ಯಾಟೋ ಪಡೆಗಳ ಬೆದರಿಕೆಗೆ ಜಗ್ಗದೇ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದಾರೆ.