ನವದೆಹಲಿ: ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಶ್ನಿಸಿದ್ದಾರೆ.
ಪಕ್ಷೇತರ ಶಾಸಕರಾರದ ನಾಗೇಶ್ ಮತ್ತು ಶಂಕರ್ ಅವರು ವಿಶ್ವಾಸ ಮತಯಾಚನೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹಟಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ಕಿರಿಯ ವಕೀಲರನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದರು. ಬೆಳಗ್ಗೆ 10:45ಕ್ಕೆ ವಿಚಾರಣೆ ಸಂದರ್ಭದಲ್ಲಿ ಇಬ್ಬರು ಹಿರಿಯ ವಕೀಲರು ಗೈರಾಗಿದ್ದನ್ನು ನೋಡಿದ ಮುಖ್ಯ ನ್ಯಾಯಾಧೀಶರು ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ ಎಂದು ಪ್ರಶ್ನಿಸಿದರು.
ಪಕ್ಷೇತರ ಶಾಸಕರ ಪರವಾಗಿ ಹಾಜರಾಗಿದ್ದ ಜ್ಯೂನಿಯರ್ ಲಾಯರ್ ದೀಕ್ಷಾ ರೈ ವಿಶ್ವಾಸ ಮತಯಾಚನೆ ಸಾಬೀತಾದ ಹಿನ್ನೆಲೆ ಅರ್ಜಿಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ನಂತರ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಿತು. ಇಂದಿನ ವಿಚಾರಣೆ ವೇಳೆ ಸಿಎಂ ಪರ ವಕೀಲ ರಜೀವ್ ಧವನ್ ಹಾಜರಾಗಿದ್ದರು.
ಮಂಗಳವಾರದ ಅರ್ಜಿ ವಿಚಾರಣೆ ವೇಳೆ ಮುಕುಲ್ ರೋಹಟಗಿ, ಸೋಮವಾರ ಮಧ್ಯರಾತ್ರಿಯವರೆಗೂ ಅಧಿವೇಶನ ನಡೆದಿದೆ. ಇಂದು ಸಂಜೆಗೆ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಪ್ರತಿ ದಿನ ಕಲಾಪದಲ್ಲಿ ಹೀಗೆ ನಡೆಯುತ್ತಿರುವುದರಿಂದ ನೀವೇ ಒಂದು ಆದೇಶ ಪ್ರಕಟಿಸಿ ಎಂದು ಪೀಠದಲ್ಲಿ ಮನವಿ ಮಾಡಿದ್ದರು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜುಲೈ 18ಕ್ಕೆ ಕಲಾಪ ಆರಂಭಗೊಂಡಿದ್ದು ಹಲವು ಮಂದಿ ಮಾತನಾಡಬೇಕಿದೆ. ಇತಿಹಾಸವನ್ನು ನೋಡಿದರೆ ಸುದೀರ್ಘ ಚರ್ಚೆ ನಡೆದಿದೆ. ಸದನದಲ್ಲಿ ಅಭಿಪ್ರಾಯ ಮಂಡನೆ ಆಗುತ್ತಿರುವಾಗ ರಾಜ್ಯಪಾಲರು ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಚರ್ಚೆ ಮಧ್ಯೆ ಮತಕ್ಕೆ ಹಾಕುವುದು ಹೇಗೆ ಎಂದು ಪ್ರಶ್ನಿಸಿದ್ದರು.
ಸಿಎಂ ಪರ ವಾದ ವಕೀಲ ರಾಜೀವ್ ಧವನ್, ವಿಶ್ವಾಸ ಮತ ಯಾಚನೆ ಆರಂಭವಾದ ಸಮಯದಲ್ಲಿ ಒತ್ತಡ ಹಾಕಬಾರದು. ಚರ್ಚೆ ನಡೆಯುತ್ತಿದೆ. ಈ ವೇಳೆ ಮತಕ್ಕೆ ಹಾಕುವ ನಿರ್ಧಾರ ಸರಿಯಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಹಾಗಾದರೆ ವಿಶ್ವಾಸ ಮತಯಾಚನೆ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿಂಘ್ವಿ ಇಂದು ಸಂಜೆಯ ಒಳಗಡೆ ಮತಕ್ಕೆ ಹಾಕುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಉತ್ತರಿಸಿದ್ದರು. ಸಿಂಘ್ವಿ ಅವರಿಂದ ಈ ಉತ್ತರ ಬರುತ್ತಿದ್ದಂತೆ, ನಾವು ಅದೇ ಆಶಾ ಭಾವದಿಂದ ಕಾದು ನೋಡುತ್ತೇವೆ. ಒಂದು ವೇಳೆ ಮತಕ್ಕೆ ಹಾಕದೇ ಇದ್ದರೆ ನಾಳೆ ವಿಚಾರಣೆ ನಡೆಸೋಣ ಎಂದು ಹೇಳಿ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದರು.