ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸ್ಪೀಕರ್ ರಮೇಶ್ ಕುಮಾರ್ 17 ಮಂದಿ ಅತೃಪ್ತ ಶಾಸಕರ ಪೈಕಿ ಮೂವರನ್ನು ಈಗಾಗಲೇ ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಹಳ್ಳಿ ಹಾಗೂ ರಾಣೆ ಬೆನ್ನೂರಿನ ಶಂಕರ್ ಅವರನ್ನು ಅನರ್ಹ ಮಾಡಿ ಆದೇಶ ನೀಡಿದ್ದಾರೆ. ಹಾಗಾದರೆ ಈ ಮೂವರು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗಿದೋಯ್ತಾ ಅಥವಾ ಇವರು ಮುಂದೆ ಏನ್ ಮಾಡಬಹುದು ಎಂಬ ಕುತೂಹಲ ಇದೀಗ ಮೂಡಿದೆ.
ಏನ್ ಮಾಡಬಹುದು..?
ಸ್ಪೀಕರ್ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬಹುದು. ಮೊದಲು ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿ ಸ್ಪೀಕರ್ ಆದೇಶಕ್ಕೆ ತಾತ್ಕಾಲಿಕ ತಡೆ ಕೋರಬಹುದು. ಸ್ಪೀಕರ್ ಈ ಹಿಂದೆ ನೀಡಿದ್ದ ದೂರಿನ ಮೇಲೆ ಅನರ್ಹ ಮಾಡಿದ್ದು ಸರಿಯಲ್ಲ ಎಂದು ವಾದಿಸಬಹುದು. ಈ ಹಿಂದೆ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಪ್ರಸ್ತಾಪಿಸಿ, ತಮ್ಮನ್ನ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಬಹುದು. ಫೆಬ್ರವರಿಯಲ್ಲಿ ನೀಡಿದ್ದ ದೂರಿಗೆ ಸುದೀರ್ಘ ಸಮಯ ತೆಗೆದುಕೊಂಡ ಬಗ್ಗೆ ಪ್ರಶ್ನೆ ಮಾಡಬಹುದು. ಕಾಂಗ್ರೆಸ್ ವಿಪ್ಗೆ ನಾವು ಉತ್ತರ ನೀಡಿದ್ದೇವೆ ಎಂದು ದಾಖಲಾತಿ ನೀಡಬಹುದು.
ಇತ್ತ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ನನ್ನ ಮೇಲೆ ದೂರು ನೀಡುವ ಅಧಿಕಾರ ಇಲ್ಲವೆಂದು ವಾದ ಮಾಡಬಹುದು. ನನಗೆ ವಿಪ್ ನೀಡುವ ಅಧಿಕಾರ ಸಹ ಕಾಂಗ್ರೆಸ್ಗೆ ಇಲ್ಲವೆಂದು ಪ್ರಶ್ನಿಸಬಹುದು. ಒಂದು ವೇಳೆ ಸ್ಪೀಕರ್ ಆದೇಶಕ್ಕೆ ತಡೆ ನೀಡಿದರೆ, ಅನರ್ಹ ಶಾಸಕರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬಹುದು. ಅನರ್ಹಗೊಂಡ ಮೂವರು ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಇವತ್ತೇ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಹಿಂದೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಸ್ಪೀಕರ್ ಅನರ್ಹತೆ ಮಾಡಿದ್ದು ಸರಿಯಲ್ಲವೆಂದು ವಾದ ಮಾಡಲಿದ್ದಾರೆ. ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸುವ ಸಾಧ್ಯತೆ ಇದೆ.