ನವದೆಹಲಿ: ಸುತ್ತಮುತ್ತ ನಿರಂತರವಾಗಿ ಶತ್ರು ದೇಶದ ಯುದ್ಧ ಭೀತಿ ಇರುವುದರಿಂದ ಇಸ್ರೇಲ್ನಲ್ಲಿ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಮಿಲಿಟರಿ ಟ್ರೈನಿಂಗ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮಾದರಿಯಲ್ಲಿಯೇ ಕೊಂಚ ಬದಲಾವಣೆ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ಯುವಕರನ್ನು ಮಿಲಿಟರಿಯತ್ತ ಸೆಳೆಯಲು ದೇಶದಲ್ಲಿ ಅಗ್ನಿಪಥ್ ಯೋಜನೆಯನ್ನು ತರಲಾಗಿದೆ.
ಏನಿದು ಅಗ್ನಿಪಥ್?:
ನೂತನ ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ 3 ವಿಭಾಗಗಳಲ್ಲಿ ಆಸಕ್ತ ಯುವಕ-ಯುವತಿಯರ ತರಬೇತಿಯೂ ಸೇರಿದಂತೆ ನಾಲ್ಕು ವರ್ಷದ ಮಟ್ಟಿಗೆ ಅಗ್ನಿವೀರ್ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. 10ನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವವರು ಅಗ್ನಿವೀರರಾಗಲು ಅರ್ಹರಾಗಿದ್ದಾರೆ. 4 ವರ್ಷದಲ್ಲಿ ಮೊದಲು 6 ತಿಂಗಳು ತರಬೇತಿ ಇರುತ್ತದೆ. ಮೆರಿಟ್ ರೀತಿಯ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. ಇದು ಇಡೀ ದೇಶಕ್ಕೆ ಅನ್ವಯ ಆಗುತ್ತದೆ.
ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷ ರೂ. ದಿಂದ 6.92 ಲಕ್ಷ ರೂ.ದವರೆಗೆ ಸ್ಯಾಲರಿ ಪ್ಯಾಕೇಜ್ ಇರುತ್ತದೆ. ತಿಂಗಳಿಗೆ 30 ಸಾವಿರದಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಅಗ್ನಿವೀರರಿಗೆ ಸುಮಾರು 11.70 ಲಕ್ಷ ರೂ. ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ಟ್ಯಾಕ್ಸ್ ಇರಲ್ಲ. ವೈದ್ಯಕೀಯ ವಿಮೆಯೂ ಇರಲಿದೆ. ಆದರೆ ಪಿಂಚಣಿ ಇರಲ್ಲ.
ಇದರಲ್ಲಿ ಶೇ. 25ರಷ್ಟು ಅಗ್ನಿವೀರರು ಸೇನೆಯಲ್ಲಿ 15 ವರ್ಷ ಸೇನೆಯ ವಿವಿಧ ವಿಭಾಗದಲ್ಲಿ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ. ಅಗ್ನಿವೀರರು ತಮ್ಮ ಸೇವೆಯ ಅವಧಿಯಲ್ಲಿ ಹುತಾತ್ಮರಾದರೆ ಅವರಿಗೆ ವಿಮೆ ಹೊರತುಪಡಿಸಿ 1 ಕೋಟಿ ರೂ. ಪರಿಹಾರ ನೀಡಲಾಗುವುದು. ಇದನ್ನೂ ಓದಿ: ಮೋದಿ ನಾಟಕ ನಂಬಲು ಯುವಕರು ಮೂರ್ಖರಲ್ಲ: ದಿನೇಶ್ ಗುಂಡೂರಾವ್
ಅಗ್ನಿಪಥ್ ವಿರೋಧ ಯಾಕೆ?: ನಿರುದ್ಯೋಗದಿಂದ ಹೊರಬರಲು ತಕ್ಷಣ ಮಾಡಿರುವ ಯೋಜನೆಯಾಗಿದೆ. ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. 4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ