ಮುಜಾಫರ್ನಗರ: ಮದುವೆ ಊಟದ ಮೆನುವಿನಲ್ಲಿ ಗೋಮಾಂಸ ಇಲ್ಲವೆಂದು ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ವಿಲಕ್ಷಣ ಘಟನೆ ಉತ್ತರಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ದರಿಯಾಗಾರ್ಹ್ ಗ್ರಾಮದಲ್ಲಿ ನಡೆದಿದ್ದು, ವರದಿ ಪ್ರಕಾರ, ವರನ ಕಡೆಯವರು ಮದುವೆ ಊಟೋಪಚಾರದಲ್ಲಿ ಗೋ ಮಾಂಸ ಬಡಿಸಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಗೋ ಮಾಂಸ ಮಾಡಿ ಬಂದಂತಹ ಅತಿಥಿಗಳಿಗೆ ಬಡಿಸಬೇಕು. ಇಲ್ಲವೆಂದಲ್ಲಿ ವರದಕ್ಷಿಣೆಯಾಗಿ ಕಾರು ನೀಡಬೇಕು. ಒಂದು ವೇಳೆ ಇವೆರಡೂ ಬೇಡಿಕೆ ಈಡೇರದೇ ಇದ್ದರೆ ಮದುವೆ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಊಟದಲ್ಲಿ ಗೋಮಾಂಸ ಇಲ್ಲದ್ದಕ್ಕೆ ಈಗ ಮದುವೆಯನ್ನೇ ಮುರಿದಿದ್ದಾರೆ.
ಈ ಬಗ್ಗೆ ವಧುವಿನ ತಾಯಿ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ವರನ ಕಡೆಯವರು ಗೋ ಮಾಂಸ ಇಲ್ಲವೇ ಕಾರು ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಕಾರು ನೀಡಲು ನಮ್ಮಿಂದ ಸಾಧ್ಯವಿಲ್ಲ. ಇನ್ನು ಸರ್ಕಾರ ಈಗಾಗಲೇ ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿದೆ. ಈ ಮಧ್ಯೆ ನಾವು ಹೇಗೆ ಗೋಮಾಂಸ ಮಾಡಿ ಅತಿಥಿಗಳಿಗೆ ಬಡಿಸಲು ಸಾಧ್ಯ. ಹೀಗಾಗಿ ವರನ ಕಡೆಯವರೇ ನಮಗೆ ಈ ಮದುವೆ ಬೇಡ ಎಂದಿದ್ದಾರೆ ಅಂತಾ ಹೇಳಿದ್ದಾರೆ.
ಸದ್ಯ ಗೋಮಾಂಸದ ವಿಚಾರ ಮುಂದಿಟ್ಟು ಮದುವೆ ಮುರಿದ ವರನ ಸಂಬಂಧಿಕರ ವಿರುದ್ಧ ಪಾಟ್ವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.