ನವದೆಹಲಿ: ಸಿಎಂ ಕುರ್ಚಿ ಕದನ ಕೊನೆಗೂ ಅಂತ್ಯ ಕಂಡಿದೆ. ತಾವೇ ಸಿಎಂ (CM) ಆಗಬೇಕೆಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ (DK Shivakumar) ಕೊನೆಗೂ ಸಿದ್ದರಾಮಯ್ಯ (Siddaramaiah) ಅವರಿಗೆ ಸ್ಥಾನ ಬಿಟ್ಟು ಕೊಟ್ಟು ಡಿಸಿಎಂ (DCM) ಆಗಲು ಒಪ್ಪಿಗೆ ನೀಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರ ಹಾಗೂ ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಲೇ ಬೇಕಾಗುತ್ತದೆ ಎಂದು ಡಿಕೆಶಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಡಿಕೆಶಿ, ಕರ್ನಾಟಕದ ಜನತೆಗೆ ಬದ್ಧರಾಗಿರಬೇಕು. ಪಾರ್ಲಿಮೆಂಟ್ ಎಲೆಕ್ಷನ್ ಇನ್ನೇನು ಹತ್ತಿರದಲ್ಲೇ ಇದೆ. ಹೀಗಾಗಿ ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ನಾನು ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಲೇ ಬೇಕಾಗಿದೆ. ಪಕ್ಷದಲ್ಲಿ ಹೆಚ್ಚಿನವರು ನಿರ್ಧರಿಸಿದಂತೆ ನಡೆದುಕೊಳ್ಳಲೇ ಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?
ಪಕ್ಷದ ಹಿರಿಯರು ಮಾಡಿರುವ ಸೂತ್ರವನ್ನು ಈಗ ಒಪ್ಪಿಕೊಳ್ಳಲೇಬೇಕು. ಕೆಲವೊಮ್ಮೆ ಅವರು ಏನು ಹೇಳುತ್ತಾರೋ ಅದನ್ನು ನಾವು ಕೇಳಲೇ ಬೇಕಾಗುತ್ತದೆ. ಅಂತಿಮವಾಗಿ ನಮಗೆ ದೊಡ್ಡ ಜವಾಬ್ದಾರಿಯಿದೆ. ನಾವು ಕರ್ನಾಟಕದ ಜನತೆಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಶನಿವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪ್ರಮಾಣವಚನ