ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸಂಸದ ವಿ.ಶ್ರೀನಿವಾಸಪ್ರಸಾದ್, ನಾವೆಲ್ಲರೂ ಧರ್ಮದ ಅಫೀಮು ತಿಂದಿದ್ದೇವೆ. ಅದರ ನಶೆ ನಮ್ಮನ್ನು ಹೇಗೇಗೋ ಆಡಿಸುತ್ತಾ ದಾರಿ ತಪ್ಪಿಸುತ್ತಿದೆ ಎಂದು ಹೇಳಿದ್ದಾರೆ.
ಚಾಮರಾಜನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಧರ್ಮವನ್ನು ಮನುಷ್ಯನ ಒಳಿತಿಗಾಗಿ ಉಪಯೋಗಿಸಬೇಕು. ಆದರೆ ಇಂದು ಧರ್ಮದ ವೈಭವೀಕರಣ ಆಗುತ್ತಿದೆಯೇ ಹೊರತು ಒಳಿತಿಗಾಗಿ ಉಪಯೋಗ ಆಗುತ್ತಿಲ್ಲ. ಎಲ್ಲರಿಗೂ ಈ ಕೊರಗು ಇದ್ದೇ ಇದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಕೋಮು ಗಲಭೆಗೆ ಕಾಂಗ್ರೆಸ್, ಬಿಜೆಪಿನೇ ನೇರ ಕಾರಣ: ಹೆಚ್.ಡಿ. ದೇವೇಗೌಡ
ನಮ್ಮ ಧರ್ಮ ಹಾಗಿದೆ, ಹೀಗಿದೆ ಎನ್ನುವುದು ಬಿಟ್ಟು, ಅದರ ಒಳಿತನ್ನು ಸಮಾಜಕ್ಕೆ ಹಂಚಬೇಕು. ಆದರೆ ನಾವು ಧರ್ಮದ ಅಫೀಮನ್ನು ತಿಂದಿದ್ದೇವೆ. ಅದರ ನಶೆ ನಮ್ಮ ದಾರಿ ತಪ್ಪಿಸುತ್ತಿದೆ. ಸಮಾಜದ ಇತ್ತೀಚಿನ ಬೆಳವಣಿಗೆಗಳು ನೋವುಂಟುಮಾಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿಯ 150 ಸ್ಥಾನ ಬಂದೇ ಬರುತ್ತದೆ ಎನ್ನುವ ಕುರಿತು ಪ್ರತಿಕ್ರಿಯಿಸಿ, ಆಡಳಿತ ವಿರೋಧಿ ಸನ್ನಿವೇಶವಿದ್ದರೂ ನಾಲ್ಕು ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಏಕೆಂದರೆ ಬಿಜೆಪಿ ಶಕ್ತಿಯುತವಾಗಿ ಹೋರಾಟ ನಡೆಸಿದ್ದು, ಜನರೂ ಪಕ್ಷದ ಆಡಳಿತವನ್ನು ಮೆಚ್ಚಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಆಡಳಿತ ಉತ್ತಮವಾಗಿದೆ, ಗೂಂಡಾಗಿರಿ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲಿನ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಕೋವಿಡ್ ಏರಿಕೆ ಈ ಎಲ್ಲ ಸಂಕಷ್ಟ ನಡುವೆಯೂ ಜನರು ಬಿಜೆಪಿ ಗೆಲ್ಲಿಸಿದ್ದಾರೆ. ಇದರಿಂದ ಬಿಜೆಪಿ ಒಂದು ಸಂಘಟಿತ ಪಕ್ಷವಾಗಿದೆ ಎಂಬುದು ತಿಳಿಯುತ್ತದೆ ಎಂದು ಶ್ಲಾಘಿಸಿದರು.