ಕಿಚ್ಚ ಸುದೀಪ್ (Kiccha Sudeep)-ನಿರ್ಮಾಪಕ ಎನ್.ಕುಮಾರ್ (N.Kumar) ನಡುವೆ ಮುಂದುವರೆದ ಜಟಾಪಟಿ ಮುಂದುವರೆದಿದೆ. ಹಣ ನಡೆದು, ಕಾಲ್ಶೀಟ್ ನೀಡಿಲ್ಲ ಎಂದು ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಆರೋಪಿಸಿದ್ದರು. ಈ ವಿಚಾರಕ್ಕೆ ಕಿಚ್ಚ ಸುದೀಪ್ ಇದೆಲ್ಲವನ್ನು ನ್ಯಾಯಾಲಯದಲ್ಲಿಯೇ ನೋಡಿಕೊಳ್ಳುತ್ತೇವೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಿರ್ಮಾಪಕ ಕುಮಾರ್ ಫಿಲ್ಮ್ ಚೆಂಬರ್ ಮುಂದೆ ಧರಣಿ ಕೂತಿದ್ದಾರೆ. ನ್ಯಾಯ ಸಿಗುವ ತನಕ ಫಿಲ್ಮ್ ಚೆಂಬರ್ (Film Chamber) ಮುಂದೆ ಪ್ರತಿಭಟನೆ ಮಾಡ್ತೀವಿ ಅಂತಾ ನಿರ್ಮಾಪಕ ಕುಮಾರ್ ಮಾತನಾಡಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ನಿರ್ಮಾಪಕ ಕುಮಾರ್, ಎಲ್ಲರಿಗೂ ಗೊತ್ತು ನಂಗೆ ಆಗಿರುವ ಸಮಸ್ಯೆ. ಫಿಲ್ಮ್ ಚೆಂಬರ್ ಚಿತ್ರರಂಗಕ್ಕೆ ಒಂದು ಮನೆ ಇದ್ದ ಹಾಗೆ. ಹೀಗಾಗಿ ಇಲ್ಲಿನೇ ಬಗೆಹರಿಸಿಕೊಳ್ಳಲು ಬಂದಿದ್ದೇನೆ. ಸುದೀಪ್ ಅವರ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದಷ್ಟೇ ಹೇಳಿದ್ದೀನಿ. ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಸಿಕೊಳ್ಳುವುದು ನನ್ನ ಉದ್ದೇಶ. ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಕುಳಿತುಕೊಳ್ಳುತ್ತೇನೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ
ನಾನು ಯಾರ ಸಹಾಯವನ್ನು ಕೇಳಿಲ್ಲ. ನಮ್ಮದು ಏನಿದೆ ಅದನ್ನ ಕ್ಲಿಯರ್ ಮಾಡಿದ್ರೆ ಸಾಕು. ನಾವೂ ನಿರ್ಮಾಪಕರು, ಸಾಕಷ್ಟು ಜನರನ್ನು ಬೆಳೆಸಿದ್ದೀವಿ. ಸಭೆಗೆ ಬರಲಿ, ಸಭೆಯ ಮುಂದೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಯಾರಿಗೂ ಅಗೌರವ ಆಗಬಾರದು, ಗೌರವ ಉಳಿಯಬೇಕು. ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು. ಮಾಧ್ಯಮದವರ ಮುಂದೆಯೇ ಕೇಳಬೇಕು. ದಾಖಲೆಗಳು ಖಂಡಿತ ಇದೆ ಕೊಡ್ತೀನಿ.
ರಾಜಿ ಸಂಧಾನಕ್ಕೆ ನಾವೂ ತಯಾರಿದ್ದೀವಿ. ಅವರು ಕರೆಯಬೇಕು, ಆದರೆ ನಾವೇ ಕರೆಯುತ್ತೀದ್ದೀವಿ. ಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗಲ್ಲ. ನಮ್ಮಲ್ಲಿರುವ ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕು. ಶಿವಣ್ಣ ಭೇಟಿಗೆ ನಮ್ಮ ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ಈ ವೇಳೆ ಸೂರಪ್ಪ ಬಾಬು ಹಿಂದೆ ನಿಂತು ಮಾಡಿಸುತ್ತಿರುವ ವಿಚಾರ ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.