ಧಾರವಾಡ: ಲೋಕಸಭೆಯ 28 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಉಸ್ತುವಾರಿಗಳನ್ನು ನೇಮಿಸಿದ್ದು, ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಮುರುಘಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಜಯ ಸಾಧಿಸಬೇಕೆಂಬ ಉದ್ದೇಶದಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಆದರೆ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಯಾರನ್ನು ಯಾವ ಕ್ಷೇತ್ರಕ್ಕೆ ಉಸ್ತುವಾಗಿ ಕೊಟ್ಟರೆ ಲಾಭ ಆಗುತ್ತದೆ ಅನ್ನುವ ಲೆಕ್ಕಾಚಾರ ನಡೆದಿದೆ. ರಾಜ್ಯದ 106 ತಾಲೂಕುಗಳಲ್ಲಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ ಈ ವಿಚಾರವಾಗಿ ಏನನ್ನೂ ಮಾತನಾಡುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿಲ್ಲವೆಂದು ಕಿಡಿಕಾರಿದರು.
ಇದೇ ವಿಚಾರವಾಗಿ ಬಿಜೆಪಿ ಒಟ್ಟು 5 ತಂಡವಾಗಿ ರಾಜ್ಯ ಪ್ರವಾಸ ಮಾಡಿ ಬರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತದೆ. ಅಲ್ಲದೇ ಇದೇ ಡಿಸೆಂಬರ್ 3,4 ಹಾಗೂ 5ರಂದು ಬರ ಪ್ರವಾಸ ಮಾಡುತ್ತೇವೆಂದು ತಿಳಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಇದೆ ವೇಳೆ ಯಡಿಯೂರಪ್ಪ ಕೇರಳ ಪ್ರವಾಸ ವಿಚಾರಕ್ಕೆ ಮಾತನಾಡಿದ ಅವರು, ಅವರು ವೈಯಕ್ತಿಕ ಪ್ರವಾಸಕ್ಕೆ ತೆರಳಿದ್ದಾರೆ, ಯಡಿಯೂರಪ್ಪ ಹಾಗೂ ಡಿಕೆಶಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅಲ್ಲದೇ ವಿಜಯಪುರದಲ್ಲಿ ಸಚಿವ ಮನಗೂಳಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ಥಳಿ ದಹಿಸಿದ್ದ ಖಂಡನಿಯ, ಅದು ಕೆಟ್ಟ ಸಂಸ್ಕೃತಿ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv