Wayanad Landslides: ತಮಿಳುನಾಡಿನಿಂದ 5 ಕೋಟಿ ನೆರವು – ಅಗತ್ಯ ಸಹಕಾರ ನೀಡೋದಾಗಿ ಕರ್ನಾಟಕ ಸಿಎಂ ಭರವಸೆ

Public TV
3 Min Read
Drone

– ಸಾವಿನ ಸಂಖ್ಯೆ 84ಕ್ಕೆ ಏರಿಕೆ, ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯ
– ರಕ್ಷಣೆಗೆ ಧಾವಿಸಿದ ಸೇನಾ ಶ್ವಾನದಳ

ತಿರುವನಂತಪುರಂ: ಭಾರೀ ಮಳೆಯ ಹೊಡೆತಕ್ಕೆ ವಯನಾಡಿನಲ್ಲಿ ಭೂಕುಸಿತ (Wayanad Landslides) ಸಂಭವಿಸಿದ್ದು, ಸಾವಿನ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಅಲ್ಲದೇ ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಾಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಈ ನಡುವೆ ಕೇರಳಕ್ಕೆ ಅಗತ್ಯ ನೆರವು ನೀಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಭರವಸೆ ನೀಡಿದ್ದಾರೆ.

Chooralmala Wayanad landslides

ಈಗಾಗಲೇ ಸ್ಟಾಲಿನ್‌ ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯಾಚರಣೆಗಾಗಿ 5 ಕೋಟಿ ರೂ. ತುರ್ತು ನೆರವು ಘೋಷಿಸಿದ್ದಾರೆ. ಅಲ್ಲದೇ ರಾಜ್ಯದಿಂದ ರಕ್ಷಣಾ ತಂಡಗಳನ್ನು ನಿಯೋಜಿಸುವಂತೆ ಹಿರಿಯ ಐಎಎಸ್ ಅಧಿಕಾರಿಗಳಾದ ಜಿ ಸಮೀರನ್ ಮತ್ತು ಜಾನಿ ಟಾಮ್ ವರ್ಗೀಸ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ಸ್ಟಾಲಿನ್‌ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ತಮಿಳುನಾಡು ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. 20 ಅಗ್ನಿಶಾಮಕ ದಳದವರು, 20 ಸಿಬ್ಬಂದಿಯನ್ನು ಒಳಗೊಂಡ ಎಸ್‌ಡಿಆರ್‌ಎಫ್ (SDRF) ತಂಡ ಮತ್ತು 10 ವೈದ್ಯರು, ದಾದಿಯರು ಹಾಗೂ ಸಹಾಯಕ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ಕೇರಳಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆಂದು ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Delhi Coaching Centre Flooded: ಯುಪಿಎಸ್‌ಸಿ ವಿದ್ಯಾರ್ಥಿಗಳ ಸಾವಿನ ತನಿಖೆಗೆ ಸಮಿತಿ ರಚಿಸಿದ ಗೃಹ ಇಲಾಖೆ

landslides in Wayanad

ಅಲ್ಲದೇ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕೇರಳದಲ್ಲಿ (Kerala Landslides) ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

landslides in Wayanad

NDRF ತಂಡದಿಂದ ರಕ್ಷಣಾ ಕಾರ್ಯ:
ಮೆಪ್ಪಾಡಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಮಣ್ಣಿನ ರಾಶಿಯೇ ಕಂಡು ಬಂದಿದ್ದು, ರಸ್ತೆ, ಸೇತುವೆ, ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಮತ್ತೊಂದೆಡೆ ಎನ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಈವರೆಗೆ ಸುಮಾರು 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕಲ್ಪೆಟ್ಟಾದ ಬತ್ತೇರಿ ಸೇಂಟ್ ಮೇರಿಸ್ ಎಸ್‌ಕೆಎಂಜೆ ಶಾಲೆಯಲ್ಲಿ ಆಶ್ರಯ ಶಿಬಿರವನ್ನು ಸ್ಥಾಪಿಸಲಾಗಿದ್ದು, ವೈದ್ಯಕೀಯ ತಂಡಗಳು ಅಂಬುಲೆನ್ಸ್‌ಗಳೊಂದಿಗೆ ಸ್ಥಳದಲ್ಲೇ ಬಿಡುಬಿಟ್ಟಿವೆ. ಜೊತೆಗೆ ಸಂತ್ರಸ್ತರಿಗೆ ಆಹಾರ ಬಟ್ಟೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ

ರಕ್ಷಣೆಗೆ ಧಾವಿಸಿದ ಸೇನಾ ಶ್ವಾನದಳ
ಸದ್ಯ ಭೂಕುಸಿತದಿಂದ ರಕ್ಷಣೆಗೆ ಹೆಚ್ಚಿನ ಸಲಕರಣೆಗಳು ಹಾಗೂ ಸಿಬ್ಬಂದಿಯ ಅವಶ್ಯಕವಿದ್ದು, ಕೇರಳ ಸರ್ಕಾರದ ಮನವಿಯಂತೆ ಮೀರತ್ ಆರ್.ವಿ.ಸಿ ಯಿಂದ ಸೇನಾ ಶ್ವಾನದಳವನ್ನು ಕೇರಳಕ್ಕೆ ಕಳುಹಿಸಲಾಗಿದೆ. ನೌಕಾಪಡೆಯ 50 ಸದಸ್ಯರ ತಂಡ ಕೂಟ ಆಗಮಿಸಿದೆ. ಭಾರತೀಯ ನೌಕಾಪಡೆಯ ನದಿ ದಾಟುವ ತಂಡ ವಯನಾಡ್ ತಲುಪುತ್ತಿದೆ. ಎಜಿಮಲ ನೌಕಾ ಅಕಾಡೆಮಿಯಲ್ಲಿರುವ ನೌಕಾಪಡೆಯ ತಂಡವು ವೈದ್ಯಕೀಯ ತಜ್ಞರನ್ನೂ ಹೊಂದಿರುತ್ತದೆ. ಇದನ್ನೂ ಓದಿ:  ಕುಡಿಯುವ ನೀರಿಗಾಗಿ ಜನ ಮತ ಹಾಕಿದ್ದಾರೆ; ಬೆಂಗಳೂರಿಗೆ ನೀರು ಕೊಡಿ – ರಾಜ್ಯಸಭೆಯಲ್ಲಿ ಹೆಚ್‌ಡಿಡಿ ಮನವಿ

Share This Article