ಕಾರವಾರ: ಕ್ರಿಸ್ಮಸ್ (Christmas) ಸೇರಿದಂತೆ ಸಾಲು ಸಾಲು ರಜೆಗೆ (Holiday) ಪ್ರವಾಸಿಗರು (Tourist) ಮುರುಡೇಶ್ವರಕ್ಕೆ (Murudeshwar) ಬರುತ್ತಿದ್ದು, ಸಮುದ್ರ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ಬಂದ್ ಆಗಿರುವುದರಿಂದ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.
ಲೈಫ್ ಗಾರ್ಡ್, ಭದ್ರತೆ ವ್ಯವಸ್ಥೆ ಕಲ್ಪಿಸಿ ತಕ್ಷಣ ಪ್ರವಾಸಿಗರಿಗೆ ಕಡಲ ತೀರ ಭಾಗಕ್ಕೆ ಪ್ರವೇಶ ನೀಡಬೇಕು ಎಂದು ಪ್ರವಾಸೋದ್ಯಮ ನಂಬಿದ ಸ್ಥಳೀಯ ಉದ್ಯಮಿಗಳು ಜಿಲ್ಲಾಡಳಿತಕ್ಕೆ ಮನವಿ ಸಹ ನೀಡಿದ್ದರು. ಶೀಘ್ರದಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಪ್ರವಾಸಿಗರಿಗೆ ಕಡಲತೀರಕ್ಕೆ ಪ್ರವೇಶ ಸಿಗುತ್ತಿಲ್ಲ.
ಮುರುಡೇಶ್ವರದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ್ಗಳನ್ನು ನೇಮಿಸಲಾಗಿದೆ. ಎಸಿ ನೇತೃತ್ವದ ಸಮಿತಿ ಸಹ ಜಾರಿಗೆ ತರಲಾಗಿದೆ. ಬುಧವಾರದಂದು ಕಡಲ ತೀರ ಭಾಗದಲ್ಲಿ ಸುರಕ್ಷಿತ ಮತ್ತು ಅಪಾಯಕಾರಿ ವಲಯವನ್ನು ಗುರುತಿಸಿ ರೋಪ್ಗಳನ್ನು ಅಳವಡಿಸಲಾಗಿತ್ತು.
ಗುರುವಾರ ಆಗಮಿಸಿದ ಎಸಿ ಡಾ.ನಯನಾ ರೋಪ್ ಅಳವಡಿಕೆ ಮಾಡಿದ್ದು ಸರಿಯಿಲ್ಲ ಎಂದು ಹೇಳಿ ಬೇರೆ ಕಡೆ ಅಳವಡಿಸಲು ಸೂಚಿಸಿದ್ದರು. ಹೀಗಾಗಿ ಶ್ರಮ ಪಟ್ಟು ಹಾಕಿದ್ದ ರೋಪ್ಗಳನ್ನು ಮತ್ತೆ ತೆಗೆಯಲಾಗಿದೆ. ಇದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಇದಲ್ಲದೇ ರಕ್ಷಣಾ ಚಟುವಟಿಕೆ ಬಗ್ಗೆ ಅಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ. ಇದರಿಂದಾಗಿ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಇದನ್ನೂ ಓದಿ: ರೇಪ್ ಕೇಸ್ ಕೊಟ್ಟವರು ಪರಿಚಯವೇ ಇಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಲಿ: ಮುನಿರತ್ನ
ಬಹತೇಕ ಶನಿವಾರ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವುದಾಗಿ ಮೂಲಗಳಿಂದ ಮಾಹಿತಿ ಬಂದಿದ್ದು, ಹೊಸ ವರ್ಷಕ್ಕಾದರೂ ಪ್ರವಾಸಿಗರಿಗೆ ನಿರ್ಬಂಧ ತೆರವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.