ಬಳ್ಳಾರಿ: ಬೇಸಿಗೆ ಕಾಲ ಎಂದರೆ ನೀರಿನ ಸಮಸ್ಯೆ ಬರೋದು ಸಹಜ. ಆದರೆ ಈ ಊರಲ್ಲಿ ಎಷ್ಟರ ಮಟ್ಟಿಗೆ ನೀರಿನ ಬರ ಇದೆ ಎಂದರೆ ಊಟಕ್ಕೆ ತಟ್ಟೆ ಬಳಸಿದ್ರೇ, ತೊಳೆಯ- ಬೇಕಾಗುತ್ತದೆ ಎಂದು ಪ್ಲಾಸ್ಟಿಕ್ ಪ್ಲೇಟ್ಗಳನ್ನು ಬಳಸುತ್ತಿದ್ದಾರೆ. ಕುಡಿಯೋಕು ಜಗಳವಾಡಿ ನೀರು ತರೋ ಇಲ್ಲಿಯ ಜನರು ಸ್ನಾನಕ್ಕೆ ವಾರಗಟ್ಟಲೇ ಕಾಯೋಸ್ಥಿತಿ ಬಂದಿದೆ.
ಬಳ್ಳಾರಿ ನಗರದಿಂದ 10 ಕಿ.ಮಿ ದೂರದಲ್ಲಿರೋ ಹರಗಿನಡೋಣಿ ಗ್ರಾಮ ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಾಣ ಮಾಡಬೇಕೆಂದು ಅದೆಷ್ಟೋ ಬಾರಿ ಹೋರಾಟ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ನೀರಿಗಾಗಿ ಕಳೆದ ಉಪಚುನಾವಣೆಯಲ್ಲಿ ಒಂದು ಮತವನ್ನು ಹಾಕದೇ ಬಹಿಷ್ಕಾರ ಹಾಕಿದ್ರು. ಇದರಿಂದ ಎಚ್ಚತ್ತ ಜಿಲ್ಲಾಡಳಿತ ಇಲ್ಲಿಗೆ ನಿತ್ಯ ಟ್ಯಾಂಕರ್ ನೀರು ಪೂರೈಸುತ್ತಿದೆ.
5000ಕ್ಕೂ ಹೆಚ್ಚು ಜನರು ಇರೋ ಈ ಊರಲ್ಲಿ ಒಂದರೆಡು ಟ್ಯಾಂಕರ್ ನೀರು ಯಾವುದಕ್ಕೂ ಸಾಲಲ್ಲ. ಹೀಗಾಗಿ ಇದೀಗ ವಾರಕ್ಕೊಮ್ಮೆ ಸ್ನಾನ ಮಾಡೋ ಜನರು ಊಟ ಮಾಡಿದ್ರೇ, ತಟ್ಟೆ ತೊಳೆಯಲು ನೀರು ಬೇಕೆಂದು ಪೇಪರ್ ಪ್ಲೇಟ್ ಬಳಸುತ್ತಿದ್ದಾರೆ. ಅಲ್ಲದೇ ಕೈಯನ್ನು ಕೂಡ ಪೇಪರ್ ಗೆ ಒರೆಸಿಕೊಳ್ಳುತ್ತಿದ್ದಾರೆ.
ಮಳೆಗಾಲದಲ್ಲಿ ಊರಲ್ಲಿರೋ ಬೋರ್ ವೆಲ್ ಕೆಲಸ ಮಾಡುತ್ತವೆ. ಆದರೆ ಬೇಸಿಗೆಯಲ್ಲಿ ಮಾತ್ರ ಇಲ್ಲಿ ನೀರಿಗಾಗಿ ಪ್ರತಿ ವರ್ಷ ಹಾಹಾಕಾರ ಪ್ರಾರಂಭವಾಗುತ್ತದೆ. ಅದರಲ್ಲೂ ಈ ಬಾರಿ ಮೀತಿ ಮೀರಿದ ಬಿಸಿಲು ಮತ್ತು ಗ್ರಾಮಕ್ಕೆ ಬೇಕಾದಷ್ಟು ಟ್ಯಾಂಕರ್ ನೀರು ಬಾರದೇ ಇರುವುದಕ್ಕೆ ಇಲ್ಲಿಯ ಜನರು ತತ್ತರಿಸಿ ಹೋಗಿದ್ದಾರೆ.
ಟ್ಯಾಂಕರ್ ಬಂದಾಗ ಜಗಳವಾಡೋ ಇಲ್ಲಿಯ ಜನರು ಸಿಕ್ಕಷ್ಟು ನೀರನ್ನು ಬಳಸಿ ಕೊಂಡು ಜೀವನ ಮಾಡುತ್ತಿದ್ದಾರೆ. ಸ್ನಾನ, ಬಟ್ಟೆ ಒಗೆಯೋದ್ರಲ್ಲೂ ಇತಿಮಿತಿ ಮಾಡಿಕೊಂಡಿದ್ದು, ಇದೀಗ ಕುಡಿಯೋ ನೀರಿಗೂ ಕೂಡ ಕಡಿವಾಣ ಹಾಕೋ ಪರಿಸ್ಥಿತಿ ಬಂದಿದೆ.