ಭುವನೇಶ್ವರ್: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಆನೆ ಹಾಗೂ ಅದರ ಮರಿಯನ್ನು ಸತತ ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ.
ಈ ಘಟನೆ ಸಂಬಾಲ್ ಪುರ್ನ ಜುಜುಮರ ಬ್ಲಾಕ್ ನಲ್ಲಿ ನಡೆದಿದ್ದು, ನಿರಂತರ ಕಾರ್ಯಾಚರಣೆಯ ಮೂಲಕ ಇದೀಗ ತಾಯಿ ಹಾಗೂ ಮರಿಯಾನೆಯನ್ನು ರಕ್ಷಿಸಲಾಗಿದೆ.
ತಾಯಿ ಹಾಗೂ ಮರಿಯಾನೆ ಶನಿವಾರ ರಾತ್ರಿ ಸ್ಥಳೀಯ ಬಾವಿಗೆ ಬಿದ್ದಿವೆ. ಬಳಿಕ ಎಷ್ಟು ಪ್ರಯತ್ನಿಸಿದರೂ ಅವುಗಳಿಗೆ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಸ್ಥಳೀಯರು ಆನೆಗಳು ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಮುಖಾಂತರ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಅವುಗಳನ್ನು ಮೇಲೆತ್ತಿದ್ದಾರೆ. ಆನೆ ಬಾವಿಯಿಂದ ಮೇಲೆ ಬಂದು ಕಾಡಿನತ್ತ ತೆರಳುವ ಮೊದಲು 7 ವಾಹನಗಳನ್ನು ಹಾನಿಗೊಳಿಸಿದೆ.