ವಿಜಯಪುರ: ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಖಾಲಿ ವಿವಿ ಪ್ಯಾಟ್ ಬಾಕ್ಸ್ ಪತ್ತೆಯಾದ ಪ್ರಕರಣ ಮಸುವ ಮುನ್ನವೇ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ವಿವಿ ಪ್ಯಾಟ್ ರಶೀದಿ ಪತ್ತೆಯಾಗಿದೆ.
ಮತದಾನದ ಮಾಹಿತಿ ಗುಪ್ತವಾಗಿಡುವ ವಿವಿ ಪ್ಯಾಟ್ ರಶೀದಿ ಉಕ್ಕಲಿ ಗ್ರಾಮದಲ್ಲಿ ಪತ್ತೆಯಾಗಿದೆ. ರಾಜಕೀಯ ಪಕ್ಷ ವೊಂದಕ್ಕೆ ಮತದಾನ ಮಾಡಿದ ಸಾಕ್ಷಿಯಾಗಿ ಈ ರಶೀದಿಯನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತದಾನದ ಬಳಿಕ ವಿವಿ ಪ್ಯಾಟ್ ರಶೀದಿ ಹೊಂದಿರುವ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರಪಡಿಸಲಾಗಿರುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವಿವಿ ಪ್ಯಾಟ್ ರಶೀದಿ ಫೋಟೋ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮನಗೂಳಿ ಗ್ರಾಮದ ಬಳಿ ಪತ್ತೆಯಾಗಿದ್ದ ಖಾಲಿ ವಿವಿ ಪ್ಯಾಟ್ ಕುರಿತ ತನಿಖೆ ನಡೆಯುತ್ತಿರುವ ನಡುವೆಯೇ ರಶೀದಿಗಳು ಪತ್ತೆಯಾಗಿದೆ. ಈ ಕುರಿತು ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಜೆಡಿಎಸ್ ಪಕ್ಷ ಅಭ್ಯರ್ಥಿ ಸೋಮನಗೌಡ ಪಾಟೀಲ್ ತನಿಖೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ವಿವಿ ಪ್ಯಾಟ್ ಬಾಕ್ಸ್ ಪತ್ತೆ ಪ್ರಕರಣ ಸಂಬಂಧಿಸಿದಂತೆ ಅಂದು ಸ್ಪಷ್ಟನೆ ನೀಡಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ರಸ್ತೆ ಕಾಮಗಾರಿಗಾಗಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್ ಒಂದರಲ್ಲಿ 8 ವಿವಿಪ್ಯಾಟ್ ಖಾಲಿ ಬಾಕ್ಸ್ ಗಳು ಮಾತ್ರ ದೊರೆತಿದೆ. ಅಲ್ಲದೆ ಸ್ಥಳದಲ್ಲಿ ಯಾವುದೇ ವಿವಿಪ್ಯಾಟ್ ಯಂತ್ರಗಳು ಲಭ್ಯವಾಗಿರುವುದಿಲ್ಲ ಎಂದು ತಿಳಿಸಿದ್ದರು.
ಅಲ್ಲದೇ ಲಭ್ಯವಾಗಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳ ಮೇಲೆ ಯಾವುದೇ ಯೂನಿಕ್ ಐಡಿ ನಂಬರ್ ಇರುವುದಿಲ್ಲ. ಹಾಗೆಯೇ, ಈ ಖಾಲಿ ಬಾಕ್ಸ್ ಗಳು ವಿಜಯಪುರ ಜಿಲ್ಲೆಗೆ ಸಂಬಂಧಿಸಿರುವುದಿಲ್ಲ. ಜಿಲ್ಲೆಗೆ ಹಂಚಿಕೆಯಾಗಿದ್ದ 2,744 ವಿವಿಪ್ಯಾಟ್ ಗಳು ಸುರಕ್ಷಿತವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಿಟ್ಟುಕೊಳ್ಳಲಾಗಿದೆ. ದೊರೆತಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳಿಗೆ ಸಂಬಂಧಿಸಿದಂತೆ ಬಸವನ ಬಾಗೇವಾಡಿಯ ತಹಶೀಲ್ದಾರ್ ಅವರಿಗೆ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು.