ಬೆಂಗಳೂರು: ಲೋಕಸಭಾ ಚುನಾವಣೆಗೆಂದು ಹಾಂಕಾಂಗ್ ನಿಂದ ಆಗಮಿಸಿದ ದಂಪತಿ ಮತದಾನ ಮಾಡದೇ ನಿರಾಸೆ ಅನುಭವಿಸಿದ್ದಾರೆ.
ಬೆಂಗಳೂರು ಮೂಲದ ರಮೇಶ್ -ವಾಣಿ ದಂಪತಿ ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಮತಗಟ್ಟೆಗೆ ಮತದಾನ ಮಾಡಲು ಹೋಗಿದ್ದಾರೆ. ಜೊತೆಗೆ ವೋಟರ್ ಐಡಿ ಕಾರ್ಡ್ ತೆಗೆದುಕೊಂಡು ಹೋಗಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ದಂಪತಿಗೆ ಮತ ಹಾಕಲು ಚುನಾವಣಾಧಿಕಾರಿಗಳು ಅವಕಾಶ ಕೊಡಲಿಲ್ಲ.
ನಾವು ಹಾಂಕಾಂಗ್ಗೆ ಹೋಗಿ 15 ವರ್ಷಗಳಾಗಿದೆ. ಪ್ರತಿ ಚುನಾವಣೆ ನಡೆದಾಗಲೂ ಹಾಂಕಾಂಗ್ನಿಂದ ಬಂದು ಮತದಾನ ಮಾಡಿ ಹೋಗುತ್ತಿದ್ದೇವೆ. ಆದರೆ ಈಗ ವೋಟರ್ ಐಡಿ, ಆಧಾರ್ ಐಡಿ ತಂದಿದ್ದರೂ ಲಿಸ್ಟ್ ನಲ್ಲಿ ನಮ್ಮ ಹೆಸರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಮನೆಯಲ್ಲಿದ್ದ ಬಾಡಿಗೆಯವರ ಹೆಸರಿದೆ. ಆದರೆ ನಮ್ಮ ಮನೆಯವರ ಹೆಸರು ಮಾತ್ರ ಇಲ್ಲ. ಕೇಳಿದರೆ ಕಾರ್ಪೋರೇಷನ್, ಬಿಬಿಎಂಪಿ ಅವರು ಮಾಡಿದ್ದಾರೆ ಅವರನ್ನು ಕೇಳಿ ಎಂದು ಹೇಳುತ್ತಿದ್ದಾರೆ. ಇಂದು ನಾನು ಆಫಿಸ್ಗೆ ರಜೆ ಹಾಕಿ ವೋಟು ಹಾಕಲು ಅಲ್ಲಿಂದ ಬಂದಿದ್ದೇನೆ. ಮತದಾನ ನನ್ನ ಹಕ್ಕು, ಹೀಗಾಗಿ ನನ್ನ ಹಕ್ಕನ್ನು ನಾನು ಚಲಾಯಿಸಬೇಕು. ಇಂದು ವೋಟು ಹಾಕಿಯೇ ನಾನು ವಾಪಸ್ ಹಾಂಕಾಂಗ್ಗೆ ಹೋಗಬೇಕು ಎಂದು ಹೇಳಿದರು.