ವಿಜಯಪುರ: ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳು ನೀಡುವ ಹಣದ ಆಸೆಗೆ ಬಲಿಯಾಗಿ, ಮತದಾರರು ರಾಜಕಾರಣಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ತಾಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕಾರಣಿಗಳು ಮತದಾರರಿಗೆ ಹಣ ನೀಡುತ್ತಾರೆ. ದೇವಸ್ಥಾನಕ್ಕೆ, ದರ್ಗಾಗಳಿಗೆ ಹಣ ಕೊಡುತ್ತಾರೆ ಅದರಲ್ಲಿ ನಾನೂ ಕೊಟ್ಟಿದ್ದೇನೆ. ಎಲ್ಲಿಯವರೆಗೆ ಮತದಾರರು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಸುಧಾರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಶಾಲಾ ಕಾಲೇಜುಗಳಿಗೆ ಯಾರೂ ದುಡ್ಡು ಕೊಡುವುದಿಲ್ಲ ಯಾರೂ ಕೇಳುವುದಿಲ್ಲ. ಹೀಗಾಗಿ ಮತದಾರರೇ ರಾಜಕಾರಣಿಗಳನ್ನು ದಾರಿ ತಪ್ಪಿಸಿದ್ದಾರೆ. ಎಲ್ಲಿಯವರೆಗೆ ಮತದಾರರು ದೇವಸ್ಥಾನ ಹಾಗೂ ದರ್ಗಾಗಳಿಗೆ ಹಣ ಕೇಳುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶಾಲಾ ಕಾಲೇಜುಗಳು ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣಿಗಳು ಶೈಕ್ಷಣಿಕ ಅಭಿವೃದ್ಧಿಗೆ ಹಣ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.