ಬಾಗಲಕೋಟೆ: ಕೆಲಸ ಮಾಡೋರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ ಇದರಲ್ಲಿ ತಪ್ಪೇನಿದೆ? ಇದನ್ನೇ ಸಿಎಂ ಅವರ ಹೇಳಿಕೆಗೆ ಲಿಂಕ್ ಮಾಡಿದ್ದೀರಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಹೇಳಿದ್ದು, ಹಾಗಲ್ಲ. ಕೆಲಸ ಮಾಡುವವರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ? ಆದರೆ ನೀವು(ಮಾಧ್ಯಮದವರು) ನಾನು ಹೇಳಿದ ರೀತಿ ಪ್ರಸಾರ ಮಾಡಿಲ್ಲ. ಕುಮರಸ್ವಾಮಿಯವರಿಗೆ ನನ್ನನ್ನು ಲಿಂಕ್ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಇಲ್ಲ: ಮುಖ್ಯಮಂತ್ರಿಗಳ ಪ್ರವಾಸದ ಕುರಿತು ನನಗೆ ತಿಳಿದಿಲ್ಲ. ಸಿಎಂ ಎಲ್ಲವನ್ನೂ ನನ್ನ ಜೊತೆ ಮಾತನಾಡುವುದಿಲ್ಲ. ಸಮನ್ವಯ ಸಮಿತಿಯಲ್ಲಿ ಚರ್ಚಿಸುವುದನ್ನು ಹೊರತುಪಡಿಸಿ, ನಾನೂ ಸಿಎಂ ಭೇಟಿಯಾಗುವುದು ಅಪರೂಪ. ರಾಜ್ಯದಲ್ಲಿ ಆಪರೇಶನ್ ಕಮಲ ಆಗಲ್ಲ. ಅವರಿಗೇ (ಬಿಜೆಪಿ) ಆಪರೇಶನ್ ಆಗಬೇಕು ಅಷ್ಟೇ ಎಂದು ಮಾಜಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬೈಯ್ಯಾಪುರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಹಿಂದ ಸಂಘಟನೆ ಮಾಡಿದ್ದಕ್ಕೆ ಜೆಡಿಎಸ್ನಿಂದ ಹೊರಹಾಕಿದರು ಎಂಬ ಬೈಯ್ಯಾಪುರ ಹೇಳಿಕೆ ಸತ್ಯ. ಅವರು ಸರಿಯಾಗಿ ಹೇಳಿದ್ದಾರೆ. ವಾಟ್ ಇಸ್ ರಾಂಗ್? ಈಗ ಸಮ್ಮಿಶ್ರ ಸರ್ಕಾರ ಇದೆ ಎಂದು ಹಿಂದೆ ನಡೆದ ಸತ್ಯವನ್ನು ತಿರುಚಬೇಕಾ? ಈಗ ನಾನು ಕಾಂಗ್ರೆಸ್ನಲ್ಲಿದ್ದೇನೆ. ಪಕ್ಷದ ಮೂಲಕ ಅಹಿಂದ ಸಂಘಟನೆ ಮಾಡುತ್ತೇವೆ. ಹಿಂದೆ ಜೆಡಿಎಸ್ ನಿಂದ ಹೊರಹಾಕಿದ್ದರಿಂದ ಪ್ರತ್ಯೇಕ ಸಂಘಟನೆ ಮಾಡಿದ್ದೆ. ಇಂದು ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷನಾಗಿರುವುದರಿಂದ ಪ್ರತ್ಯೇಕ ಅಹಿಂದ ಸಂಘಟನೆ ಮಾಡುವುದಿಲ್ಲ. ಕುಡಿಯಲು ನೀರು ಇಟ್ಟುಕೊಂಡು ಉಳಿದದ್ದನ್ನು ಬಿಡಬೇಕು. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಇರಬೇಕು ಎಂದು ಕೆಆರ್ಎಸ್ನಿಂದ ನೀರು ಬಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಗುರುವಾರ ಆಲೂರು ಎಸ್.ಕೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡ ಶಿಲಾನ್ಯಾಸ ನೇರವೇರಿಸಿ ಲೋಕಸಭೆ ಚುನಾವಣೆಯ ವೇಳೆ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದ ವಿಚಾರವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು.
ಬಿಜೆಪಿಗೆ ಬಾದಾಮಿಯಿಂದ 9 ಸಾವಿರ ಲೀಡ್ ಹೋಗಿದೆ. ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆ ಎಂದು ಅವರಿಗೆ ವೋಟ್ ಹಾಕುತ್ತೀರಾ ಅಂತ ನನಗೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ವೋಟ್ ಹಾಕುವುದಿಲ್ಲ. ಹೀಗೆ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿ ಜನರಲ್ಲಿ ಅಸಮಾಧಾನ ಹೊರ ಹಾಕಿದ್ದರು.