ತಿರುವನಂತಪುರಂ: ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಆಕೆಯ ಪತಿ ಎಸ್. ಕಿರಣ್ ಕುಮಾರ್ಗೆ ಪೂಜಾಪುರದ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ತರಕಾರಿ ತೋಟದಲ್ಲಿ ತೋಟಗಾರನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮೊದಲ ಬಾರಿಗೆ ದೇಶದಲ್ಲೇ ವರದಕ್ಷಿಣೆ ಪ್ರಕರಣಕ್ಕೆ ಕಠಿಣ ಶಿಕ್ಷೆ ಆಗಿದ್ದು, ಈ ಪ್ರಕರಣ ಕೇರಳವನ್ನೇ ತಲ್ಲಣಗೊಳಿಸಿತ್ತು. ಸದ್ಯ ಜೈಲಿನಲ್ಲಿರುವ ಕಿರಣ್, ಅಲ್ಲಿ ಗಡಿ ಗೋಡೆಯೊಳಗೆ ಇರುವ 9.5 ಎಕರೆ ಬಯಲು ಪ್ರದೇಶದ ಕೆಲವು ಭಾಗಗಳಲ್ಲಿ ತರಕಾರಿ ಕೃಷಿಯಲ್ಲಿ ಕೆಲಸವನ್ನು ನೀಡಲಾಗಿದೆ. ಈ ರೀತಿಯ ತೋಟಗಾರಿಕೆ ಕೆಲಸಕ್ಕೆ ಕಿರಣ್ನಂತಹ ಆಯ್ದ ಜೈಲು ಕೈದಿಗಳನ್ನು ಮಾತ್ರ ನಿಯೋಜಿಸಲಾಗುವುದು.
ಕಿರಣ್ನನ್ನು ಜೈಲಿನ 5ನೇ ಬ್ಲಾಕ್ನಲ್ಲಿ ಇರಿಸಲಾಗಿದ್ದು, ಈತ ಬೆಳಗ್ಗೆ 7.15 ರಿಂದ ಸಂಜೆ 5ರ ವರೆಗೆ ಕಿರಣ್ ಕೆಲಸ ಮಾಡುತ್ತಾನೆ. ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಸ್ವಲ್ಪ ವಿರಾಮವಿದೆ. ಸಂಜೆ ಚಹಾ ನೀಡಲಾಗುತ್ತದೆ. ರಾತ್ರಿ ಊಟದ ನಂತರ 5.45ಕ್ಕೆ ಕೈದಿಗಳನ್ನು ಪುನಃ ಜೈಲಿಗೆ ಹಾಕುತ್ತಾರೆ. ಈ ಕೆಲಸಕ್ಕೆ ಪ್ರತಿನಿತ್ಯ 63 ರೂ.ಗಳನ್ನು ಆತ ಕೂಲಿಯಾಗಿ ಪಡೆಯುತ್ತಾನೆ. ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ
ಜೈಲಿನಲ್ಲಿ ಹೊಸಬರು ಅದರ ಕಾಂಪೌಂಡ್ ಗೋಡೆಯ ಹೊರಗೆ ಕೆಲಸ ಮಾಡುವಂತಿಲ್ಲ. ಸಾಮಾನ್ಯ ಅಪರಾಧಿಗಳು, ಅಪಾಯಕಾರಿ ಎಂದು ಪಟ್ಟಿಮಾಡಲ್ಪಟ್ಟವರು ಮತ್ತು ಹೆಚ್ಚಿನ ಮಾಧ್ಯಮಗಳ ಗಮನವನ್ನು ಸೆಳೆದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರನ್ನು ಸಾಮಾನ್ಯವಾಗಿ ಜೈಲಿನ ಹೊರಗೆ ಕೆಲಸಕ್ಕೆ ಕಳುಹಿಸಲಾಗುವುದಿಲ್ಲ. ಜೈಲು ಅಧಿಕಾರಿಗಳ ವಿಶ್ವಾಸ ಪಡೆದ ನಂತರವೇ ಕೈದಿಯನ್ನು ಹೊರಗಿನ ಕೆಲಸಕ್ಕೆ ಕಳುಹಿಸಲಾಗುತ್ತದೆ.
ಜೈಲು ಶಿಕ್ಷೆಯ ಹೊರತಾಗಿ ಕಿರಣ್ಗೆ 12.55 ಲಕ್ಷ ರೂ. ದಂಡವನ್ನು ವಿಧಿಸಿದ್ದು, ಅದರಲ್ಲಿ 4 ಲಕ್ಷ ರೂ.ಗಳನ್ನು ವಿಸ್ಮಯಾ ಪೋಷಕರಿಗೆ ಪಾವತಿಸಬೇಕು. ಈ ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 27 ತಿಂಗಳು 15 ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ: ಸಚಿವ ಉಮೇಶ್ ಕತ್ತಿ
2021ರ ಜೂನ್ 21ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದ ಪೊರುವಾಜಿಯಲ್ಲಿರುವ ಕಿರಣ್ನ ಮನೆಯಲ್ಲಿ ವಿಸ್ಮಯಾ ಶವವಾಗಿ ಪತ್ತೆಯಾಗಿದ್ದರು. ಕಿರಣ್ ಮತ್ತು ವಿಸ್ಮಯಾ 2020ರ ಮೇ 30ರಂದು ವಿವಾಹವಾದರು.