ಬೆಂಗಳೂರು: ಹಲವಾರು ಮಂದಿಗೆ ಉದ್ಯೋಗ ನೀಡಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ತಂದೆ ಏನೋ ಸಮಸ್ಯೆ ಇದೆ. ಹೀಗಾಗಿ ಗಮನಹರಿಸು ಎಂದು ವಿನಯ್ ಗುರೂಜಿ ಹಿರಿಯ ಪುತ್ರ ಅಮರ್ತ್ಯಗೆ ಸೂಚನೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಭಾನುವಾರ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಗುರೂಜಿಯನ್ನು ಭೇಟಿ ಮಾಡಿದ್ದರು. ಡಾಲರ್ಸ್ ಕಾಲೋನಿಯ ಭಕ್ತರೊಬ್ಬರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ತಂದೆ ಒತ್ತಡ ಹಾಗೂ ವ್ಯವಹಾರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ಯಾವುದೇ ಕಾರಣಕ್ಕೂ ತಂದೆಯನ್ನು ಬಿಟ್ಟಿರಬೇಡ, ಅವರ ಜೊತೆಯಲ್ಲೇ ಇರು. ಈ ಸಮಯದಲ್ಲಿ ನೀನು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಅವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಸೂಕ್ಷ್ಮವಾಗಿ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬರೀ ನೀರು ಕಾಣಿಸ್ತಿದೆ:
ಸಿದ್ಧಾರ್ಥ್ ನಾಪತ್ತೆಯಾಗುತ್ತಿದ್ದಂತೆಯೇ ಸೋಮವಾರ ತಡರಾತ್ರಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮ ಕೃಷ್ಣ ಅವರು ವಿನಯ್ ಗುರೂಜಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಗುರೂಜಿಯವರು, ನನಗೆ ಬರೀ ನೀರು ಮಾತ್ರ ಕಾಣಿಸುತ್ತಿದೆ. ಬೇರೇನೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಸೋಮವಾರ ಸಂಜೆ 7 ಗಂಟೆ ಸುಮಾರಿಂದ ನಾಪತ್ತೆಯಾಗಿರುವ ಸಿದ್ಧಾರ್ಥ್ ಪ್ರಕರಣ ಇದೀಗ ಭಾರೀ ಅನುಮಾನಕ್ಕೀಡಾಗಿದೆ. ಸಿದ್ಧಾರ್ಥ್ ಕುಟುಂಬಸ್ಥರು ಆತಂಕ್ಕೀಡಾದರೆ ಇತ್ತ ನದಿ ತಟದಲ್ಲಿ ಸಿದ್ಧಾರ್ಥ್ ಗಾಗಿ ಹುಡುಕಾಟ ಭರದಿಂದ ಸಾಗುತ್ತಿದೆ.