ಚಿಕ್ಕೋಡಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮಸ್ಥರೇ ಆತಂಕದಿಂದ ಕಾಲ ಕಳೆಯುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆಯುತ್ತಿದೆ.
ಸ್ವಲ್ಪ ವಿದ್ಯುತ್ ತಾಗಿದರೆ ಪ್ರಾಣ ಹೋಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಬಹುತೇಕ ಮನೆಗಳ ಮೇಲೆ ಹೈ ಟೆನ್ಶನ್ ವಿದ್ಯುತ್ ಕೇಬಲ್ ಗಳನ್ನು ಹರಿ ಬಿಟ್ಟಿದ್ದು ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಕ್ರೆಟ್ ಮನೆಗಳು ಆಗಿರುದರಿಂದ ಎಲ್ಲಿ ಸ್ವಲ್ಪ ಶಾರ್ಟ್ ಸರ್ಕ್ಯೂಟ್ ಆದರೂ ಮನೆಗೆಲ್ಲ ಕರೆಂಟ್ ತಾಗಿ ಬಿಡುತ್ತೆ ಎಂಬ ಭಯ ಜನರನ್ನು ಕಾಡುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ಲಾಸ್ಟಿಕ್ ಪೈಪ್ ಅಳವಡಿಸಿಕೊಳ್ಳಿ ಏನೂ ಆಗಲ್ಲ ಅನ್ನುತ್ತಿರುವ ಹೆಸ್ಕಾಂ ಸಿಬ್ಬಂದಿ ಮಾತು ಕೇಳಿ ಅದನ್ನೂ ಮಾಡಿದರೂ ಪ್ಲಾಸ್ಟಿಕ್ ಸುಟ್ಟು ಹೋಗುತ್ತಿದೆ. ಇದರಿಂದ ನಮಗೆ ತುಂಬ ಭಯ ಆಗುತ್ತಿದ್ದು ಚಿಕ್ಕ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರಿದ್ದಾರೆ.
ಇಲ್ಲಿನ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಯಾವುದೇ ಅವಘಡ ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews