ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಇದೇ ವಾರ ಜು.28ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಭಾರತವೂ ಸೇರಿದಂತೆ 28ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲೂ ಭಾರತದಲ್ಲಿ ಈ ಸಿನಿಮಾದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಬಹುತೇಕ ಥಿಯೇಟರ್ ಮುಂದೆ ಕಿಚ್ಚನ ಕಟೌಟ್ ತಲೆಯೆತ್ತಿ ನಿಂತಿದ್ದು, ದೇಶದಾದ್ಯಂತ ಪ್ರಚಾರದಲ್ಲಿ ಸಿನಿಮಾ ತಂಡ ತೊಡಗಿದೆ.
ಕಳೆದ ಮೂರ್ನಾಲ್ಕು ದಿನದಿಂದ ದೇಶದ ನಾನಾ ರಾಜ್ಯಗಳಲ್ಲಿ ಕಿಚ್ಚ ಮತ್ತು ತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದು, ಮೊನ್ನೆಯಷ್ಟೇ ಮುಂಬೈನಲ್ಲಿ ಇವೆಂಟ್ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ರಿತಿಶ್ ದೇಶಮುಖ, ಜೆನಿಲಿಯಾ ಡಿಸೋಜಾ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಾ ರಾ ರಕ್ಕಮ್ಮ ಹಾಡಿಗೆ ಸಲ್ಮಾನ್ ಕುಣಿದು ಸಂಭ್ರಮಿಸಿದರು. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್
ಸುದೀಪ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ಆತ್ಮೀಯರು. ಸುದೀಪ್ ಅವರನ್ನು ಸಹೋದರ ಎಂದೇ ಸಲ್ಮಾನ್ ಕರೆಯುತ್ತಾರೆ. ಅಲ್ಲದೇ, ಸಲ್ಮಾನ್ ಖಾನ್ ಗಾಗಿ ಸುದೀಪ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಹಾಗಾಗಿ ಸುದೀಪ್ ಅವರ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸಲ್ಮಾನ್ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿಯಾಗಲಿ ಎಂದು ಸಲ್ಮಾನ್ ಶುಭ ಹಾರೈಸಿದ್ದಾರೆ.