ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ ಮಂದಿರಕ್ಕೆ ಯಾಕೆ ಮಹಿಳೆಯರಿಗೆ ನಿಷೇಧ ಯಾಕೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚರಿಯಾಗಿ ಇರುವ ಕಾರಣ ಮಹಿಳೆಯರು ಹೋದರೆ ಅಯ್ಯಪ್ಪ ಸ್ವಾಮಿಗೆ ತೊಂದರೆಯಾಗಬಹುದು. ಒಬ್ಬ ಬ್ರಹ್ಮಚರಿಯಾದವನಿಗೆ ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ನಿಯಮಗಳಿರುತ್ತವೆ. ಒಟ್ಟಿನಲ್ಲಿ ಸಂಪ್ರದಾಯಕ್ಕೆ ಭಂಗ ಮಾಡುವುದರಿಂದ ದೇವಸ್ಥಾನಕ್ಕೆ ತೊಂದರೆಯಾಗಬಹುದು ಎಂದು ವಿದ್ವಾನ್ ಅನಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವನ್ನು ಪ್ರಭುಸಂಹಿತೆ ಅಂತ ಹೇಳುತ್ತೇವೆ. ಹಾಗೆಯೇ ಕೆಲವೊಂದು ಶಾಸ್ತ್ರಗಳಿವೆ. ಅವುಗಳನ್ನು ಮಿತ್ರ ಸಂಹಿತ, ಕಾವ್ಯಗಳನ್ನು ಕಾಂತಾ ಸಂಹಿತಾ ಅಂತ ಕರೆಯುತ್ತೇವೆ. ಈ ಮೂರನ್ನು ಇಟ್ಟುಕೊಂಡು ನಾವು ಜೀವನ ಮಾಡಬೇಕಿದೆ. ಇದನ್ನೂ ಓದಿ: ಅಯ್ಯಪ್ಪನ ಬಾಗಿಲು ಮಹಿಳೆಯರಿಗೆ ಮುಕ್ತ: ಸುಪ್ರೀಂ ಕೋರ್ಟ್
ಎರಡು ದೇವತೆಗಳ ಶಕ್ತಿಯ ಮಿಶ್ರಣದಿಂದ ಉದ್ಭವಾಗಿರುವ ಈ ದೇವರು ಬ್ರಹ್ಮಚಾರಿ ಎನ್ನುವ ಸ್ವರೂಪವಿದೆ. ಹಾಗಿರುವ ಕಾರಣದಿಂದ ಹಿಂದಿನ ಸಂಪ್ರದಾಯದಿಂದ ಬಂದಂತಹ ಕ್ರಮದಲ್ಲಿ ಋತುಮತಿಯಾದ ಸ್ತ್ರೀಯರು ದೇವರನ್ನು ನೋಡಬಾರದೆಂಬ ಪ್ರತೀತಿ ಇದೆ. ಇದನ್ನೂ ಓದಿ: ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ
ಅದೇ ರೀತಿಯಾಗಿ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿರ್ಬಂಧ ಎನ್ನುವುದು ಶಾಸ್ತ್ರದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಆದ್ರೆ ಸಂಪ್ರದಾಯದಲ್ಲಿ ಉಲ್ಲೇಖವಿದೆ. ಈ ಮಿತ್ರ ಸಂಹಿತೆ ಎನ್ನುವುದು ಶಾಸ್ತ್ರ ಆಗಿರೋದ್ರಿಂದ, ಇದರಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರ ಎರಡನ್ನೂ ಸೇರಿಸಿಕೊಂಡು ನಾವು ಮಂದೆ ಹೋಗಬೇಕಾಗಿದೆ.
ಈ ಆಚರಣೆ ಹಿಂದಿನಿಂದ ಬಂದಿರುವಂತಹ ಒಂದು ಸಮಂಜಸವಾದ ಕ್ರಮ. ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಯಾಕಂದ್ರೆ ಶಾಸ್ತ್ರದ ದೃಷ್ಟಿಯಿಂದ ಕುಲ ಮತ್ತು ದೇಶ ಆಚಾರ ಧರ್ಮವನ್ನು ಉಲ್ಲಂಘನೆ ಮಾಡಬಾರದು ಅಂತ ಪುರಾಣದಲ್ಲಿದೆ. ಶಾಸ್ತ್ರದಲ್ಲಿ ಹೇಳಿರುವುದರಿಂದ ಆ ಸಂಪ್ರದಾಯವನ್ನೇ ಪಾಲಿಸಿಕೊಂಡು ಮುಂದುವರಿಯಬೇಕಾಗಿದೆ ಅಂತ ಹೇಳಿದರು.
ಇದೀಗ ಒಂದು ತೀರ್ಪು ಬಂದಿದೆ. ಯಾಕಂದ್ರೆ ಅದನ್ನು ಕಾನೂನು ತಜ್ಞರೇ ನೋಡಿಕೊಳ್ಳಬೇಕು. ಇಲ್ಲಿ ಮಹಿಳೆಯರಿಗೆ ಎನಾದ್ರೂ ಆಗುತ್ತೆ ಅಂತ ಅಲ್ಲ, ದೇವರಿಗೆ ತೊಂದರೆ ಆಗಲ್ಲ, ಆದ್ರೆ ದೇವರಿಗೆ ಇದು ಸಮಂಜಸವಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv