– ಹಿಂದೂಪರ ಸಂಘಟನೆಗಳ ಆಕ್ಷೇಪ
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ನೆನಪುಗಳನ್ನು ಮೆಲುಕು ಹಾಕುವ ವಿದುರಾಶ್ವತ್ಥ ವೀರಸೌಧದ ಚಿತ್ರ ಗ್ಯಾಲರಿ ಈಗ ವಿವಾದದ ಕೇಂದ್ರಬಿಂದುವಾಗಿದೆ.
ವೀರಸೌಧದ ಚಿತ್ರ ಗ್ಯಾಲರಿಯ ಕೆಲ ಚಿತ್ರಗಳು ಹಾಗೂ ಚಿತ್ರದ ಕೆಳಗೆ ಬರೆದ ಕೆಲ ಪದಗಳು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ರಾಜ್ಯದಲ್ಲಿ ಹೊಸ ವಿವಾದವೊಂದು ಸೃಷ್ಠಿಯಾಗಿದೆ. ವಿದುರಾಶ್ವತ್ಥ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ. ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ತಾಣವೂ ಹೌದು. ಇಂತಹ ಐತಿಹ್ಯವುಳ್ಳ ಸ್ವಾತಂತ್ರ್ಯ ಸಂಗ್ರಾಮದ ಸ್ಥಳದಲ್ಲಿ ಕಳೆದ 10 ವರ್ಷಗಳ ಹಿಂದೆ ತಲೆ ಎತ್ತಿರುವ ವೀರಸೌಧದ ಫೋಟೋ ಗ್ಯಾಲರಿ ಈಗ ವಿವಾದಿತ ಕೇಂದ್ರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ಸನ್ನಿವೇಶಗಳನ್ನು ಫೋಟೋಗಳ ರೂಪದಲ್ಲಿ ಕಟ್ಟಿಕೊಡುವ ಕೆಲಸವನ್ನು ನಿವೃತ್ತ ಪ್ರೊಫೆಸರ್ ಬಿ.ಜಿ ಗಂಗಾಧರಮೂರ್ತಿ ಮಾಡಿದ್ದಾರೆ. ಆದ್ರೆ ಈ ಗ್ಯಾಲರಿಯಲ್ಲಿನ ಕೆಲ ಫೋಟೋಗಳು ಈಗ ವಿವಾದಕ್ಕೀಡಾಗಿದ್ದು. ಸ್ವಾತಂತ್ರ್ಯ ಸೇನಾನಿಗಳ ಫೋಟೋ ಜೊತೆಗೆ ಕೆಳಭಾಗದಲ್ಲಿ ಹಿಂದೂ ಕೋಮುವಾದ-ಮುಸ್ಲಿಂ ಕೋಮುವಾದ ಎಂಬ ತಲೆ ಬರಹಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ಷೇಪಣೆಗೆ ಕಾರಣವಾಗಿವೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್ – ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ
ಚಿತ್ರ ಗ್ಯಾಲರಿಯ ಸ್ಥಾಪಕ ಗಂಗಾಧರ ಮೂರ್ತಿ ಹೇಳೋದೇನು?
ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮತಿಯಡಿ ಬರುವ ವೀರಸೌಧದಲ್ಲಿ ಸಮಿತಿಯ ಸಲಹೆಗಾರರಾಗಿರುವ ನಿವೃತ್ತ ಪ್ರೊಫೆಸರ್ ಹಾಗೂ ಚಿಂತಕ ಗಂಗಾಧರ ಮೂರ್ತಿ ಈ ವೀರಸೌಧ ಗ್ಯಾಲರಿಯ ಸ್ಥಾಪಕರಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಹಗಲು ರಾತ್ರಿ ಸಾಕಷ್ಟು ವರ್ಷಗಳ ಕಾಲ ಇತಿಹಾಸವನ್ನು ಅಧ್ಯಯನ ಮಾಡೇ ಈ ಚಿತ್ರ ಗ್ಯಾಲರಿಯನ್ನು ನಿರ್ಮಾಣ ಮಾಡಿದ್ದೇವೆ. ಕಳೆದ 10-12 ವರ್ಷಗಳಿಂದ ಇಲ್ಲದ ವಿವಾದ ಈಗ ಆರಂಭವಾಗಿದೆ. ಕೆಲವರು ಉದ್ದೇಶಪೂರ್ವಕವಾಗಿಯೇ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ. ಹಿಂದೂ ಕೋಮುವಾದ-ಮುಸ್ಲಿಂ ಕೋಮುವಾದ ಅಂತ ಬಳಸಲಾಗಿದೆ. ಹಿಂದೂ ಕೋಮುವಾದ ಅಂತ ಹೆಸರು ಈಗ ಸೃಷ್ಟಿಸಿರೋದಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು
ನಾನು 2006ರಲ್ಲಿ ಕೆಲಸ ಆರಂಭ ಮಾಡಿ 2009ರಲ್ಲಿ ಮುಗಿಸಿ 2012ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿದೆ. 1985ರಲ್ಲಿ ಎನ್ಸಿಇಆರ್ಟಿ ಸಂಸ್ಥೆಯ ಮೂಲಗ್ರಂಥದ ಆಧಾರದ ಜೊತೆಗೆ ಗೊಂದಲ ಬಂದಾಗ ಇತಿಹಾಸಕಾರರ ಪುಸ್ತಕಗಳನ್ನು ಅಧ್ಯಯನ ಮಾಡಿ ಈ ಗ್ಯಾಲರಿ ನಿರ್ಮಿಸಿದ್ದೇವೆ. ತುಂಬಾ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಒಳ್ಳೆಯ ಕೆಲಸ ಅಂತ ಅಭಿನಂದಿಸಿದ್ದಾರೆ, ಕಳೆದ 20 ದಿನಗಳಿಂದ ಕೆಲ ಪ್ರತಿರೋಧಗಳು ಬರ್ತಿವೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆಲ ಫೋಟೋಗಳು ಒಪ್ಪಿಗೆ ಇಲ್ಲ ಎಂದು ಅವನ್ನು ತೆಗೆದು ಹಾಕಲು ಒತ್ತಡ ಹಾಕಿದ್ದಾರೆ. ತೆಗೆಯದೆ ಹೋದರೆ ಬೆಂಕಿ ಹಾಕ್ತೀವಿ ಅನ್ನೋ ಬಾಷೆ ಸಹ ಕೆಲವರು ಬಳಸಿದ್ದಾರೆ ಅಂತ ಗಂಗಾಧರ ಮೂರ್ತಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಗಳು
ಗಂಗಾಧರ ಮೂರ್ತಿಯವರ ಪ್ರಕಾರ ಹಿಂದೂ ಸಂಘಟನೆಗಳು ಚಿತ್ರ ಗ್ಯಾಲರಿಯಲ್ಲಿ ಮುಸ್ಲಿಮರಿಗೂ ಸ್ವಾತಂತ್ರ್ಯ ಹೋರಾಟಗಾರರಿಗೂ ಏನು ಸಂಬಂಧ ಯಾಕೆ ಆ ರೀತಿ ಬಿಂಬಿಸಿದ್ದೀರಿ? ಗೋಡ್ಸೆ-ಸಾರ್ವಕರ್ಗೆ ಅನ್ಯಾಯ ಆಗುವ ರೀತಿ ಬಿಂಬಿಸಿರುವ ಆರೋಪ, ಟಿಪ್ಪು ವೈಭವೀಕರಣ ಮಾಡಿರುವ ಆರೋಪ, ಹಿಂದೂ ಕೋಮುವಾದ ಪದ ಬಳಕೆಗೆ ಆಕ್ಷೇಪ, ಆ ಪದ ಬಳಸದಂತೆ ಒತ್ತಡ, ನಾವು ಹಿಂದೂ ಕೋಮುವಾದ ಅಂತಲೂ ಮುಸ್ಲಿಂ ಕೋಮುವಾದ ಅಂತಲೂ ಬಳಸಿದ್ದೇವೆ. ಕೋಮುವಾದ ಎಲ್ಲ ಧಾರ್ಮಿಕ ಸಂಘಟನೆಗಳಲ್ಲಿ ಇರುವಂತಹದ್ದು. ಆಯಾ ಧರ್ಮದವರು ಆ ಕೋಮಿನ ಪರವಾಗಿ ವಾದ ಮಾಡ್ತೀವಿ ಅನ್ನೋರಿಗೆ ಕೋಮುವಾದ ಪದ ಬಳಸುತ್ತೇವೆ. ಆದ್ರೆ ಇದಕ್ಕೆ ತಗಾದೆ ತಗೆದಿದ್ದಾರೆ ಎಂದು ದೂರಿದ್ದಾರೆ.
ವೀರಸೌಧಕ್ಕೆ ಪೊಲೀಸ್ ಭದ್ರತೆ
ವಿವಾದಗಳ ನಂತರ ವೀರಸೌಧಕ್ಕೆ ಭದ್ರತೆಗಾಗಿ ಮನವಿ ಮಾಡಲಾಗಿದ್ದು ವೀರಸೌಧಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೀರಸೌಧಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ವಿವಾದಿತ ವೀರಸೌಧಕ್ಕೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಆಕ್ಷೇಪಣೆಗಳನ್ನು ಸಂದರ್ಶಕರ ಪುಸ್ತಕದಲ್ಲಿ ಬರೆಯುತ್ತಿದ್ದಾರೆ. ಈ ನಡುವೆ ಕೆಲವರು ಮೌಖಿಕವಾಗಿ ವೀರಸೌಧದಲ್ಲಿರುವ ಸಿಬ್ಬಂದಿಗೆ ಧಮ್ಕಿ ಹಾಕಿರುವ ಆರೋಪ ಮಾಡಲಾಗಿದ್ದು, 10-12 ವರ್ಷಗಳಿಂದ ಇಲ್ಲದ ವಿವಾದ ಈಗ ಆರಂಭವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.