ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದು ಮಧ್ಯಪ್ರದೇಶದ ಆಪರೇಷನ್ ಕಮಲದ ರಾಜಕೀಯ ವಿಷಯ ಚರ್ಚೆಯ ವಿಷಯವಾಯ್ತು. ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸಂವಿಧಾನದ ಮೇಲಿನ ಚರ್ಚೆ ವೇಳೆ ಬಿಜೆಪಿ ಅವರ ಆಪರೇಷನ್ ಕಮಲದ ವಿರುದ್ಧ ಕಿಡಿಕಾರಿದರು. ಬಿಜೆಪಿ ಆಪರೇಷನ್ ಪ್ರಜಾಪ್ರಭುತ್ವಕ್ಕೆ ಮಾರಕ ಅಂತ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಇವತ್ತು ತಲುಪಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಅಂತ ಕಿಡಿಕಾರಿದರು. ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆಯವರು, ರಿಯಲ್ ಎಸ್ಟೇಟ್ ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಅಂತ ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ, ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ ಇದೆ. ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ ಅಂತ ಅಸಮಾಧಾನ ಹೊರ ಹಾಕಿದರು. ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜಗನ್ನಾಥರಾವ್ ಜೋಷಿ ಬಳಿ ಚಿಕಿತ್ಸೆಗೆ ಹಣ ಇರಲಿಲ್ಲ ಅಂತ ಉದಾಹರಣೆ ಕೊಟ್ಟರು.
ಮಾತು ಮುಂದುವರಿಸಿದ ಎಸ್.ಆರ್.ಪಾಟೀಲ್, ಇವತ್ತಿನ ರಾಜಕಾರಣದಲ್ಲಿ ಆಯಾ ರಾಮ್ ಗಯಾ ರಾಮ್ ಹೆಚ್ಚಾಗುತ್ತಿದೆ. ಗೆದ್ದ ಮೇಲೆ ಪಕ್ಷ ಬದಲಾವಣೆ ಮಾಡುತ್ತಾರೆ. ನಮ್ಮ ಕಡೆ ಇದನ್ನು ಗೋಸುಂಬೆ ಅಂತ ಕರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದು ಯಾರಿಗೆ ಪ್ರಯೋಜನ ಆಗಲಿದೆ. ಪಕ್ಷ ಬದಲಾವಣೆ ಮಾಡುತ್ತಿರುವುದರಿಂದ ಜನರಿಗೆ ಪ್ರಜಾಪ್ರಭುತ್ವದ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಅಂತ ಟೀಕಿಸಿದರು.
ಮಧ್ಯಪ್ರದೇಶದ ಶಾಸಕರು ಇಲ್ಲಿಗೆ ಬಂದಿದ್ದಾರೆ. ನಮ್ಮವರು ಮುಂಬೈಗೆ ಹೋಗಿದ್ದರು ಎನ್ನುತ್ತಿದ್ದಂತೆ ಗುಜರಾತ್ ನಿಂದಲೂ ಬಂದಿದ್ದರು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಸ್.ಆರ್ ಪಾಟೀಲ್ ಹಣ, ಅಧಿಕಾರದ ಆಸೆಗೆ ಶಾಸಕರು ಬಲಿಯಾಗುತ್ತಿದ್ದಾರೆ. ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಿದ್ದಾರಂತೆ. ಹೀಗೆ ಆದರೆ ಪ್ರಜಾಪ್ರಭುತ್ವ ಉಳಿಯೋದಿಲ್ಲ ಅಂತ ಕಿಡಿಕಾರಿದರು. ನನ್ನನ್ನ ಪ್ರಧಾನಿ ಮಾಡ್ತೀನಿ ಎಂದರೂ ನಾನು ಪಕ್ಷ ಬಿಡೊಲ್ಲ. ಇವರು ಯಾಕೆ ಹೀಗೆ ಮಾಡ್ತಾರೆ ಅಂತ ಪ್ರಶ್ನೆ ಮಾಡಿದರು. ಹಣದ ಆಮಿಷಕ್ಕೆ ಬಲಿಯಾಗೋರಿಗೆ ನಾಚಿಕೆ ಆಗಬೇಕು ಅಂತ ಆಪರೇಷನ್ ಕಮಲದ ವಿರುದ್ಧ ವಾಗ್ದಾಳಿ ನಡೆಸಿದರು.