ಬೆಂಗಳೂರು: ರೈತರ ಪರವಾಗಿ ವಿಧಾನ ಪರಿಷತ್ನಲ್ಲಿ ಮಂಡನೆಯಾಗಿದ್ದ ಖಾಸಗಿ ವಿಧೇಯಕವನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ಇಂದು ವಿಧಾನ ಪರಿಷತ್ನಲ್ಲಿ ಖಾಸಗಿ ವಿಧೇಯಕದ ಮೇಲೆ ಚರ್ಚೆ ನಡೆಯಿತು. ಚರ್ಚೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ವಿಧೇಯಕವನ್ನ ತಿರಸ್ಕಾರ ಮಾಡಿದರು.
2018ರ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ನ ಸದಸ್ಯ ಶರಣಪ್ಪ ಮಟ್ಟೂರು ಕರ್ನಾಟಕ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವಿಕೆ ನಿಷೇಧ ವಿಧೇಯಕವನ್ನ ಮಂಡನೆ ಮಾಡಿದರು. ರೈತರು ಸಾಲ ಪಡೆದು ಅಸಲಿಗಿಂತ ಹೆಚ್ಚು ಬಡ್ಡಿ ಕಟ್ಟಿರುತ್ತಾರೆ. ಆದರೆ ಅಷ್ಟು ಹಣ ಕೊಟ್ಟರು ಪದೇ ಪದೇ ಬಡ್ಡಿಗೆ ಹಣ ಕೊಟ್ಟವನು ಪೀಡಿಸುತ್ತಿರುತ್ತಾನೆ. ಇದನ್ನು ನಿಯಂತ್ರಣ ಮಾಡಲು ಈ ವಿಧೇಯಕವನ್ನ ಮಟ್ಟೂರ್ ಅವರು ಮಂಡನೆ ಮಾಡಿದ್ದರು.
ಇವತ್ತಿನ ಕಲಾಪದಲ್ಲಿ ಈ ಖಾಸಗಿ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ನಡೀತು. ಸದಸ್ಯ ಶರಣಪ್ಪ ಮಟ್ಟೂರು ರೈತರಿಗೆ ಹೆಚ್ಚಿನ ಬಡ್ಡಿಯಿಂದ ಕಂಗಾಲಾಗಿದ್ದಾರೆ. ಬಡ್ಡಿ ಕಟ್ಟಲು ಆಗದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ರೈತರ ರಕ್ಷಣೆಗಾಗಿ ಈ ವಿಧೇಯಕ ಅಂಗೀಕಾರ ಮಾಡಬೇಕು ಅಂತ ಮನವಿ ಮಾಡಿದರು. ಮಟ್ಟೂರ್ ಮಾತಿಗೆ ಜೆಡಿಎಸ್ನ ಮರಿತಿಬ್ಬೇಗೌಡ ಧ್ವನಿಗೂಡಿಸಿದರು.
ಸದಸ್ಯರ ಖಾಸಗಿ ವಿಧೇಯಕದ ಚರ್ಚೆಗೆ ಸರ್ಕಾರದ ಪರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಉತ್ತರ ಕೊಟ್ಟರು. ಈಗಾಗಲೇ ಹೆಚ್ಚಿನ ಬಡ್ಡಿ ಪಡೆಯುವವರ ವಿರುದ್ಧ ಕಾನೂನು ಜಾರಿಯಲ್ಲಿದೆ. ಹೀಗಾಗಿ ಖಾಸಗಿ ವಿಧೇಯಕ ಅವಶ್ಯಕತೆ ಇಲ್ಲ. ಈ ಕಾಯ್ದೆ ಮಹತ್ವವೂ ಇಲ್ಲ. ಈ ಕಾಯ್ದೆಯನ್ನ ಸರ್ಕಾರ ತಿರಸ್ಕಾರ ಮಾಡುತ್ತೆ ಅಂತ ಚರ್ಚೆಗೆ ಅಂತ್ಯ ಹಾಡಿದರು.