ಚಾಮರಾಜನಗರ: ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಹೊಗೆನಕಲ್ ಜಲಪಾತಕ್ಕೆ ನಿಷೇಧ ಹೇರಲಾಗಿದೆ.
ಸುತ್ತಮುತ್ತಲಿನ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ತುಂಬಿವೆ. ಆದ್ದರಿಂದ ಕೆಆರ್ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಹರಿಯುತ್ತಿರುವುದರಿಂದ ಕೊಳ್ಳೆಗಾಲದ ಸಮೀಪವಿರುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗಿದೆ.
ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಆರ್ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಕಡಿಮೆಯಾಗುವವರೆಗೂ ಪ್ರವಾಸಿಗರಿಗೆ ನಿಷೇಧ ಮುಂದುವರಿಯಲಿದೆ.
ಸದ್ಯ ಹೊಗೆನಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಸಹ ನೀರಿನಿಂದ ಮುಳುಗಡೆಯಾಗಿದೆ. ಈ ಮೊದಲು ಬೆಂಗಳೂರು ಮೂಲಕ ಇಬ್ಬರು ಟೆಕ್ಕಿಗಳು ಹೊಗೆನಕಲ್ ನಲ್ಲಿ ಕೊಚ್ಚಿ ಹೋಗಿ ತಮ್ಮ ಪ್ರಾಣಕಳೆದುಕೊಂಡಿದ್ದರು.